ಚಾಪ್ಲಿನ್ ಚಿತ್ರ: ಹಾಲಿವುಡ್ ಮ್ಯೂಸಿಯಂಜೋಗಿ ಫೊಟೋ ಕೃಪೆ: ಅವಧಿ ಬ್ಲಾಗ್
ಬೈಂದೂರಿನ ಸೋಮೇಶ್ವರ ದೇವಳದೆದುರು ಚಾರ್ಲೀ ಚಾಪ್ಲಿನ್ ವಿಗ್ರಹವೂ,
ಜೋಗಿ ಅರಮನೆಯಲ್ಲಿ ಮೈಕೆಲ್ ಜಾಕ್ಸನ್ ಮೂರ್ತಿ ಪ್ರತಿಷ್ಠಾಪನೆಯೂ!
ಎಲ್ಲಾ ಮಾಧ್ಯಮ ಗೆಳೆಯರಂತೆ ಕನ್ನಡ ಬ್ಲಾಗ್ ಲೋಕ ಅರಮನೆಯ ಸ್ವಘೋಷಿತ ರಾಜ ಜೋಗಿಯವರೂ ಬೈಂದೂರಿನ ಮರವಂತೆ ಬೀಚಿನ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪನೆ ವಿವಾದದ ಬಗ್ಗೆ ಬರೆದಿದ್ದಾರೆ (http://avadhi.wordpress.com/2009/03/14/ಜೋಗಿ-ಬರೆದಿದ್ದಾರೆ-ದಯವಿಟ್/), ದೇವಸ್ಥಾನದ ಎದುರು ಕರಾವಳಿ ಕರ್ನಾಟಕಕ್ಕೇ ಸಂಬಂಧವೇ ಇರದ ಯಾರೋ ವಿದೇಶೀ ನಟನ ಪ್ರತಿಮೆಗೆ ವಿರೋಧಿಸಿದವರನ್ನು ಇಂದಿನ ಎಲ್ಲಾ ಮಾಧ್ಯಮದವರಂತೆ "ಹಿಂದುತ್ವವಾದಿಗಳು" ಎಂದು ಲೇಬಲ್ ಹಚ್ಚಿಬಿಟ್ಟಿದ್ದಾರೆ, ಹಾಸ್ಯದ ಹೆಸರಲ್ಲಿ ಕರಾವಳಿ ಕರ್ನಾಟಕದ ಜನರ ಮೇಲೆ ಉಗಿದಿದ್ದಾರೆ, ತಮ್ಮ ಬ್ಲಾಗ್ ಪೋಸ್ಟಿಗೆ ಫ್ಯಾನ್ ಬಾಯ್ಗಳಿಂದ (Fan Bois) ಹೊಗಳಿಕೆಯನ್ನೂ ಪಡೆದಿದ್ದಾರೆ.
ಆದರೆ ಇಲ್ಲಿ ನಿಜವಾಗಿ ನಡೆದಿದ್ದೇನೆಂದು ನೋಡ ಹೊರಟರೆ ಇದೊಂದು ಪಬ್ಲಿಸಿಟಿ ಸ್ಟಂಟೆಂದು ಎಲ್ಲರಿಗೂ ಗೊತ್ತಾಗುತ್ತದೆ. ಮರವಂತೆಯಲ್ಲಿ ಚಾಪ್ಲಿನ್ ಮೂರುತಿ ಪ್ರತಿಷ್ಠಾಪನೆ ಮಾಡಲು ಹೊರಟಿರುವ ಯಾರೂ ಇದುವರೆಗೆ ಹೆಸರೇ ಕೇಳದಿರುವ "ಸಿನೆಮಾ ನಿರ್ದೇಶಕ" ಹೇಮಂತ ಹೆಗಡೆ ತನ್ನ ಖಾಸಾ ಗೆಳೆಯನೆಂದು ಜೋಗಿಯವರು ಬ್ಲಾಗಿನಲ್ಲೇ ಹೇಳಿಕೊಂಡಿದ್ದಾರೆ. ಈ ಇಡೀ ನಾಟಕ ಪ್ರಚಾರಕ್ಕಾಗಿ ಜೋಗಿ ಮತ್ತವರ ಮಾಧ್ಯಮ ಮಿತ್ರರ ಕಿತಾಪತಿಯೆಂದೂ ಕಂಡು ಬರುತ್ತಿದೆ.
ಇನ್ನು ಚಾಪ್ಲಿನ್ ವಿರೋಧದ ವಿಷಯಕ್ಕೆ ಬಂದರೆ:
೧. ಸ್ಥಳೀಯರು ಚಾಪ್ಲಿನ್ ವಿಗ್ರಹ ವಿರೋಧಿಸುತ್ತಿರುವುದು ಅದು ಸೋಮೇಶ್ವರ ದೇವಸ್ಥಾನದ ಬಳಿ ಇದೆಯೆಂದು. ಇಡೀ ಗ್ರಾಮಸ್ಥರೇ ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ - ಹಿಂದೂಗಳು ಮಾತ್ರವಲ್ಲ, ಕ್ರೈಸ್ತ ಮುಸ್ಲಿಂ ಬಾಂಧವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
೨. ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯಿತುಗಳಿಗೆ ಇದು ಸಿನೆಮಾ ಶೂಟಿಂಗಿಗೆ ಪ್ರತಿಮೆ ಎಂದು ಮೊದಲು ಹೇಳಿ ನಂತರ ಪರ್ಮನೆಂಟ್ ಪ್ರತಿಮೆ ಸ್ಥಾಪಿಸಲು ಈ ಭೂಪತಿಗಳು ಹೊರಟಿದ್ದರು. ಸಿನೆಮಾ ಶೂಟಿಂಗಿಗೆ ಮಾತ್ರ ಪರ್ಮಿಟ್ ಇದೆ ಇವರಲ್ಲಿ, ಶಾಶ್ವತ ಪ್ರತಿಮೆಗೆ ಅಲ್ಲವೆಂಬುದು ವಾಸ್ತವ.
೩. ಅಷ್ಟಕ್ಕೂ ಪ್ರತಿಮೆ ಸ್ಠಾಪಿಸಲು ಹೊರ್ಅಟಿರುವ ಪ್ರದೇಶ "ಸಿ.ಆರ್.ಜ಼ೆಡ್" (CRZ - Coastal Regulatory Zone) ಅಡಿ ಬರುವ ಪ್ರದೇಶ - ಹಾಗಾಗಿ ಜಿಲ್ಲಾಡಳಿತವೂ ಶಾಶ್ವತ ಕಟ್ಟಡ, ಪ್ರತಿಮೆ ಕಟ್ಟಲು ಕೊಡುವ ಸಾಧ್ಯತೆಯೇ ಇಲ್ಲ!
೪. ಇಂದು ಕರಾವಳಿ ಕರ್ನಾಟಕಕ್ಕೆ ಸಂಬಂಧವಿರದ ಚಾರ್ಲೀ ಚಾಪ್ಲಿನ್, ಇನ್ನು ನಾಳೆ ಮೈಕೆಲ್ ಜಾಕ್ಸನ್ / ಬಾಕ್ಸರ್ ಮೊಹಮ್ಮದ್ ಆಲಿ ಪ್ರತಿಮೆಗಳನ್ನು ವಿಧಾನಸೌಧ ಅಥವಾ ಮೈಸೂರು ಅರಮನೆಯೆದುರು ಸ್ಥಾಪಿಸುತ್ತೇವೆಯೆಂದು ಬಂದರೆ ಜನರು ಸುಮ್ಮನಿರುತ್ತಾರೆಯೇ?
೫. ಅಷ್ಟಕ್ಕೂ ನಮ್ಮ ನಾಡಲ್ಲಿ ಹಾಸ್ಯಗಾರರ ಬರ ಇದೆಯೇ? ಚಾರ್ಲಿ ಚಾಪ್ಲಿನ್ ಬದಲು ತೆನಾಲಿ ರಾಮಕೃಷ್ಣ ಪ್ರತಿಮೆ ಯಾಕೆ ಬೇಡ?
ಹೀಗೆ ವಾಸ್ತವಗಳನ್ನು ನೋಡ ಹೊರಟರೆ, ಇದು ಮತ್ತೇನೂ ಅಲ್ಲ ಚಲನಚಿತ್ರಕ್ಕೆ ಪಬ್ಲಿಸಿಟಿ ಸ್ಟಂಟೆಂಬುದು ಸ್ಪಷ್ಟವಾಗುತ್ತದೆ.
ಈವರೆಗೆ ಯಾರೂ ಕಂಡು ಕೇಳರಿಯದ ಸಿನೆಮಾದವರು ಒಂದು ದಿನ ಮರವಂತೆಗೆ ಬಂದು "ಗಿನೆಸ್ ರೆಕಾರ್ಡ್ ಚಾರ್ಲಿ ಚಾಪ್ಲಿನ್ ಪ್ರತಿಮೆ ಮಾಡುತ್ತೇವೇ"ಯೆಂದು ಹೇಳಿದಾಗಲೀ ಕರಾವಳಿಯ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಿನೆಮಾದವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಲಂಡನಿನಿಂದ ಗಿನೆಸ್ ದಾಖಲೆ ಪುಸ್ತಕದ ಮೈಕೆಲ್ ಅನ್ನುವವರು ಬರುತ್ತಾರೆ, ವೀಡಿಯೋ ಮಾಡಲಿದ್ದಾರೆಂದೆಲ್ಲಾ ಬುರುಡೆ ಬಿಟ್ಟಾಗ "ಉಂದು ಆಪಿನಿ ಪೋಪಿನಿ ಅತ್ತು ಮಾರ್ರೇ" (ಇದು ಆಗುವುದು ಹೋಗುವುದಲ್ಲ ಮಾರಾಯರೇ) ಎಂದು ನಕ್ಕು ಅಲ್ಲೇ ಅದನ್ನು ಮರೆತು ಬಿಟ್ಟಿದ್ದರು.
ಈ ಚಿತ್ರದವರ ಸಹಾಯಕ್ಕೆ ಟೊಂಕ ಕಟ್ಟಿದ್ದ ಸ್ಥಳೀಯರಲ್ಲಿ ಜನಾರ್ಧನ ಮರವಂತೆಯೆಂಬ ಪತ್ರಕರ್ತ ಇದ್ದರೆಂಬುದು ಉಲ್ಲೇಖನೀಯ. ಕೊಲ್ಲೂರಿಗೆ ದೇವರ ಬಳಿ ಕೆಲಕಾಲ ಕಳೆಯಲು ಭಕ್ತಿಯಿಂದ ಬರುವ ದಕ್ಷಿಣ ಭಾರತದ ಸಿನಿಮಾ ಉದ್ದಿಮೆಯವರನ್ನು ಪಾಫರಾಜಿಯಾಗಿ ಹಿಂಸಿಸಿ ಅವರ ಎರಡು ನುಡಿ ಮುತ್ತುಗಳನ್ನು ಬರೆದುಕೊಂಡು "ಪತ್ರಕರ್ತ"ನೆಂದಾದವರು ಈ ಜನಾರ್ಧನ ಮರವಂತೆ.
ಆರ್ಥಿಕ ತಾಪತ್ರಯದಿಂದಲೋ ಅಥವಾ ಪ್ರತಿಮೆಗೆ ಪರ್ಮಿಶನ್ ಸಿಗುವುದು ಅಸಾಧ್ಯವೆಂದು ತಿಳಿದ ಮೇಲೆ ಕೆಲಸ ಕೈಬಿಟ್ಟ ಈ ಸಿನೆಮಾದವರು ಮುಖ ಉಳಿಸಿಕೊಳ್ಳಲು ಮೊರೆ ಹೊಕ್ಕಿದ್ದು ಇದೇ ಜನಾರ್ಧನ ಮರವಂತೆ ಮತ್ತು ಜೋಗಿಯವರನ್ನು!
ಹೇಗೂ ಕರಾವಳಿ ಕರ್ನಾಟಕದ ಜನರನ್ನು ಅನಾಗರಿಕರು, ಮೂಲಭೂತವಾದಿಗಳು, ಅಭಿವೃದ್ಧಿ ವಿರೋಧಿಗಳು, ಹಿಂದುತ್ವವಾದಿಗಳು ಎಂದೆಲ್ಲಾ ಎಲ್ಲಾ ಮಾಧ್ಯಮಗಳು ಹೀಗಳಿಸಿಯಾಗಿರುವಾಗ ಇದನ್ನೂ "ಹಿಂದುತ್ವವಾದಿಗಳ" ಮುಖಕ್ಕೆ ಹಚ್ಚಿದರೆ ಚಿತ್ರಕ್ಕೆ ಬಿಟ್ಟಿ ಪಬ್ಲಿಸಿಟಿಯೂ ದೊರಕುತ್ತದೆ, ತಮ್ಮ ಮುಖವೂ ಉಳಿಯುತ್ತದೆ, ಅತ್ತ ಸ್ಥಳೀಯರನ್ನು ಅನಾಗರಿಕರೆಂದು, ಹಿಂದುತ್ವವಾದಿಗಳೆಂದು ಹೀಗಳಿಸಲೂ ಆಗುತ್ತದೆಯೆಂದು ಸ್ಕೆಚ್ ಹಾಕಿತು ಜನಾರ್ಧನ ಮತ್ತು ಜೋಗಿಯ ಮಾಧ್ಯಮ ಪಡೆ! ತಾವೇ ಕೆಲ ಬಾಡಿಗೆ ವಿರೋಧಿಗಳನ್ನು ಕರೆಸಿ, ಅವರು ಬರುವ ಸಮಯಕ್ಕೆ ತಕ್ಕಾಗಿ ಟಿವಿ೯ ಮತ್ತಿತರ ಟಿವಿ/ಪತ್ರಕರ್ತರ ದಂಡು ಇರುವಂತೆಯೂ ನೋಡಿಕೊಂಡು ಪಬ್ಲಿಸಿಟಿಗಾಗಿ ಪ್ರತಿಭಟನೆಯೂ ನಡೆಯಿತು.
ಅಲ್ಲಾ ಸ್ವಾಮೀ, ಒಂದು ಎರಡು ಕೋಟಿ ಬಜೆಟ್ ಮೀರದ, ದಿನಬೆಳಗಾದರೆ ತೋಪೆದ್ದು ಹೋಗುವ ಕನ್ನಡ ಚಿತ್ರರಂಗದಲ್ಲಿ - ಅದೂ ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ - ಯಕ:ಶ್ಚಿತ್ ಒಂದು ಚಾರ್ಲಿ ಚಾಪ್ಲಿನ್ ಪ್ರತಿಮೆಗಾಗಿ ೩೫ ಲಕ್ಷ ಖರ್ಚು ಮಾಡಲು ಹೊರಟಿದ್ದರೆಂದರೆ ಯಾರು ನಂಬುತ್ತಾರೆ?
ಆ ಪ್ರಶ್ನೆಯನ್ನು ಬದಿಗಿಟ್ಟು, ಸರಕಾರಿ ಜಾಗದಲ್ಲಿ ಅದರಲ್ಲೂ ದೇವಸ್ಥಾನದ ಎದುರು ಒಬ್ಬ ವಿದೂಷಕನ ಪ್ರತಿಮೆ ಮಾಡಲು ಹೊರಟಿದ್ದವರು ಬಿಜಾಪುರದ ಗೋಳಗುಂಬಜಿನೆದುರು ನಮ್ಮದೇ ದ್ವಾರಕೀಶ್ ಅಥವಾ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚಿನೆದುರು ಕರ್ನಾಟಕದ ಹಾಸ್ಯಗಾರ ನರಸಿಂಹ ರಾಜು ಪ್ರತಿಮೆ ಸ್ಥಾಪಿಸಲು ಧೈರ್ಯಮಾಡಲಿ ನೋಡೋಣ?
ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರನ್ನು ಮೇಲೆ ಹೇಳಿದಂತೆ ಅನಾಗರಿಕರು, ಹಿಂದೂ ಮೂಲಭೂತವಾದಿಗಳೆಂದು ಹೀಯಳಿಸಲು ವ್ಯವಸ್ಥಿತ ಸಂಚೇ ನಡೆದಂತೆ ಕಾಣುತ್ತದೆ. ಕರಾವಳಿ ಕರ್ನಾಟಕ ಹಿಂದೆದಿಗಿಂತಲೂ ಇಂದು ಬೃಹತ್ ಉದ್ದಿಮೆಗಳನ್ನು, ವಿಶೇಷ ಆರ್ಥಿಕ ವಲಯ, ಉತ್ತಮ ದರ್ಜೆಯ ವಿದ್ಯಾಸಂಸ್ಥೆಗಳಿಂದಾಗಿ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನೂ ಕೈ ಬೀಸಿ ಕರೆಯುತ್ತಿದೆ. ಪ್ರಾಯಷ: ಈ ಆರ್ಥಿಕ ಬೆಳವಣಿಗೆ ಬಯಸದವರು ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಈ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಒಂದೇ ಸಮಧಾನದ ಸಂಗತಿಯೆಂದರೆ ಸ್ಥಳೀಯ ಮಾಧ್ಯಮಗಳು ಈ ಜಾಲಕ್ಕೆ ಬಿದ್ದಂತಿಲ್ಲ - ಇದು ಅಭಿವೃದ್ಧಿ ವಿರೋಧಿಗಳಿಗೆ ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ - "ಕರಾವಳಿ ಕರ್ನಾಟಕದ ಮಾಧ್ಯಮಗಳೂ ಮೂಲಭೂತ ಸಂಘಟನೆಗಳ ಹಿಡಿತಕ್ಕೆ ಸಿಲುಕಿವೆ" ಯೆಂದೆಲ್ಲಾ ಮೈ ಪರಚಿಕೊಳ್ಳುತ್ತಿದ್ದಾರೆ!
ಪಬ್ಬು ಧಾಳಿ, ತೆಹೆಲ್ಕಾದ ಸೂಸನ್ ಪ್ರಾಯೋಜಿತ "ಪಿಂಕ್ ಚೆಡ್ಡಿ" ಅಭಿಯಾನ, ಕೇರಳದ ಕಮ್ಯೂನಿಸ್ಟ ಎಂ.ಎಲ್.ಎ., ತನ್ನ ಮಗಳು ಮುಸ್ಲಿಂ ಹುಡುಗನೊಂದಿಗೆ ತಿರುಗಾಡುವುದನ್ನು ನಿಲ್ಲಿಸಲು ತನ್ನ ಭಂಟರಿಗೇ ಆತನ ಮೇಲೆ ಹಲ್ಲೆ ಮಾಡಲು ಹೇಳಿ ಕಡೆಗೆ ಅದನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿದ್ದು, ೨೭ ವರ್ಷದ ಬಸ್ ಕ್ಲೀನರ್ ಸಲೀಂನಿಂದಾಗಿ ಹದಿಹೆರೆಯದ ಅಶ್ವಿನಿಯ ಆತ್ಮಹತ್ಯೆಯನ್ನೂ ಹಿಂದು ಸಂಘಟನೆಗಳ ಮೇಲೆ ಹೇರಿದ್ದ ಘಟನೆಗಳ ಸಾಲಿಗೇ "ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ಹಿಂದೂ ಸಂಘಟನೆಗಳ ಅಡ್ಡಿ"ಯೆಂಬ ಪ್ರಕರಣವೂ ದಾಖಲಾಗಿದೆ.
ಪುಂಖಾನುಪುಂಖವಾಗಿ ಬ್ಲಾಗುಗಳು (ಇಲ್ಲಿದೆ ನೋಡಿ ಇನ್ನೊಬ್ಬ ಪತ್ರಕರ್ತನ ಬ್ಲಾಗು - ಚುರುಮುರಿ ಇಂಗ್ಲಿಷ್ ಬ್ಲಾಗ್ ಪ್ರಕಾರ ದೇವಸ್ಥಾನದ ಎದುರು ಚಾಪ್ಲಿನ್ ಪ್ರತಿಮೆ ವಿರೋಧಿಸುವವರು ಹಿಂದೂ ಜೋಕರುಗಳಂತೆ, ಹಿಂದೂ ಡಿಕ್ಟೇಟರುಗಳಂತೆ), ಪತ್ರಿಕೆಗಳು, ಟಿವಿ ಮಾಧ್ಯಮಗಳು ಕರಾವಳಿ ಕರ್ನಾಟಕದ ಜನರು ಅನಾಗರೀಕರೆಂದು ಈ ಚಾಪ್ಲಿನ್ ಘಟನೆಯ ಮೂಲಕ ಹೀಯಳಿಸಲು, ವಾಸ್ತವ ಬಚ್ಚಿಡಲು ಜೋಗಿ ಮತ್ತು ಜನಾರ್ಧನ ಸಿನಿ ಪತ್ರಕರ್ತ ಜೋಡಿ ಸದ್ಯಕ್ಕೆ ಯಶಸ್ವಿಯಾಗಿದೆ.
ಜೋಗಿ ಮತ್ತವರ ಸಿನಿಮಾ ಮಿತ್ರರು ತಮ್ಮ ಮನೆಯಲ್ಲಿ ಅಥವಾ ಸ್ವಂತ ಜಾಗದಲ್ಲಿ ಚಾಪ್ಲಿನ್ ಅಥವಾ ಮೈಕೆಲ್ ಜಾಕ್ಸನ್ ಮೂರ್ತಿ ಸ್ಥಾಪಿಸಲಿ, ಯಾರೂ ಬೇಡವೆನ್ನುವುದಿಲ್ಲ. ಆದರ ಸರಕಾರೀ ಜಾಗದಲ್ಲಿ, ಅದರಲ್ಲೂ ರಮಣೀಯ ಕಡಲತಡಿಯಲ್ಲಿ ಸಂಬಂಧವೇ ಇಲ್ಲದ ನಟನ ಪ್ರತಿಮೆ ಸ್ಥಾಪನೆ ಆಗಬೇಕು, ಅದನ್ನು ವಿರೋಧಿಸುವವರು ಮೂಲಭೂತವಾದಿಗಳು, ತಾಲಿಬಾನಿಗಳೆಂದೆಲ್ಲಾ ಆರೋಪ ಮಾಡುವ ಪ್ರವೃತ್ತಿಯನ್ನು ಖಂಡಿಸಬೇಕಾಗಿದೆ.
Note: ಗಮನಿಸಬೇಕಾದ ಸಂಗತಿಯೆಂದರೆ ಮಾಧ್ಯಮ ಸ್ವಾತಂತ್ರದ ಬಗ್ಗೆ ಘಂಟೆಗಟ್ಟಳೆ ಕೊರೆಯುವ ಪತ್ರಕರ್ತರ ಬ್ಲಾಗುಗಳಲ್ಲಿ ಅವರ ಅಭಿಪ್ರಾಯಕ್ಕೆ ಭಿನ್ನವಾದ ಕಮೆಂಟ್ ಹಾಕಿ ನೋಡಿ? ನಾನು ಜೋಗಿಯವರ ಬ್ಲಾಗಿಗೆ ಮೇಲಿನ ಪ್ರಶ್ನೆಗಳನ್ನು ಕೇಳಿ Respectful ಆಗಿಯೇ ಕಮೆಂಟಿಸಿದ್ದೆ - ಊಹೂಂ, ಕಮೆಂಟ್ ಪಬ್ಲಿಶ್ ಮಾಡಿಲ್ಲ ಜೋಗಿ ಮಹಾಶಯರು.
ಪ್ರಾಯಷ: ಜೋಗಿಯವರ ಅರಮನೆಗೆ ಹೊಗಳು ಭಟರಿಗೆ ಮಾತ್ರ ಪ್ರವೇಶ - ಹಿಂದಿನ ರಾಜರ ಕಾಲದಂತೆ!