Sunday, June 19, 2011

ಇಂಟರನೆಟ್ಟಿನ ಕನ್ನಡ ತಾಲಿಬಾನಿಗಳು


ಕಳೆದ ವಾರ ಯಾರೋ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ತನ್ನ ಫೇಸ್ ಬುಕ್ಕಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ಅವರ "ಕನ್ನಡೇತರರು ಕನ್ನಡ ಕಲಿಯಲೇಬೇಕು" ಎಂಬ ಹೇಳಿಕೆಯನ್ನು ತೆಗಳಿದ್ದನ್ನೇ ಆಕಾಶ ಬೀಳುತ್ತಿದೆಯೆಂದು ಪ್ರತಿಕ್ರಿಯಿಸಿದ ಕೆಲ ಕೆಲಸವಿಲ್ಲದ ಬ್ಲಾಗರುಗಳು ಈಗ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕುವಷ್ಟು ಮುಂದುವರಿದಿರುವುದು ಪ್ರಜ್ಣಾವಂತ ಕನ್ನಡಿಗರಿಗೆಲ್ಲಾ ಕಳಂಕ ತರುವಂತಹ ಸುದ್ದಿ.

ಕೆಲಸವಿಲ್ಲದೆ ಕಚೇರಿಯಲ್ಲಿ ಬೆಂಚಿನಲ್ಲಿರುವ ಕನ್ನಡ ಸಾಪ್ಟವೇರ್ ಇಂಜಿನಿಯರುಗಳು, ಕೊಲ್ಲಿ ರಾಷ್ಟ್ರಗಳಲ್ಲಿ ವೇಳೆ ಕಳೆಯುವುದು ಹೇಗೆ ಎಂದು ಗೊತ್ತಿಲ್ಲದ ಆಯಿಲ್ ಕಂಪೆನಿ ಕೆಲಸಗಾರರು ಇಂಟರನೆಟ್ಟು browse ಮಾಡುತ್ತಾ ಯಾರು ಕನ್ನಡದ ವಿರುದ್ದ ಸೊಲ್ಲೆತ್ತುತ್ತಾರೆಯೆಂಬುದನ್ನೇ ಕಾಯುತ್ತಾ ಕುಳಿತಿರುವಂತಿದೆ. ಅತ್ತ ಬೀದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪುಂಡರು ಕನ್ನಡದ ಹೆಸರಲ್ಲಿ ರೋಲ್ ಕಾಲ್ ಉದ್ದಿಮೆ ನಡೆಸುತ್ತಿರುವಂತೆ, ಇತ್ತ ಇಂಟರನೆಟ್ಟಿನಲ್ಲಿ ಅಬ್ಬೇಪಾರಿಗಳಂತೆ ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವ ಐಟಿ ಬಿಟಿಗಳು, wannabe ಪತ್ರಕರ್ತ ನಿರುದ್ಯೋಗಿಗಳು ಕನ್ನಡೇತರರ ವಿರುದ್ದ ಅಂತರ್ಜಾಲದಲ್ಲಿ ಮತ್ತೀಗ ದೂರವಾಣಿಯಲ್ಲಿ ಬೆದರಿಕೆ ಹಾಕುವಷ್ಟು ಮುಂದಿರುವುದು ಯಾವ ಕನ್ನಡ ಪ್ರೇಮವೆಂಬುದು ಅರ್ಥವಾಗುತ್ತಿಲ್ಲ.

ಈ ಇಂಟರನೆಟ್ಟು ಹೀರೋಗಳ "ಬೆಂಗಳೂರಲ್ಲಿ ಬದುಕಬೇಕಾದರೆ ಕನ್ನಡ ಕಲಿಯಲೇಬೇಕು" ಎಂಬ ವಾದವಾದರೂ logical ಅಥವಾ ಸಂವಿಧಾನ ಬದ್ಧವಾಗಿದೆಯೇ?

ಉತ್ತರ ಭಾರತೀಯನ ವಿರುದ್ದ ಅಂತರ್ಜಾಲದಲ್ಲಿ ಹಿಗ್ಗಾಮುಗ್ಗ ಬರೆದ ಅರಬ್ ರಾಷ್ಟ್ರದ ದೋಹಾ ಕತಾರಿನಲ್ಲಿ ಕುಳಿತಿರುವ ಪ.ರಾಮಚಂದ್ರ (ಖ್ಯಾತ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ಸುಪುತ್ರ) "ಸಂಪಾದಕೀಯ" ಎಂಬ ಬ್ಲಾಗಿನಲ್ಲಿ ಹೇಗೆ ತಾನು ರಾಬಿನ್ ಚುಗ್ಗಿಗೆ ಫೋನ್ ಇಮೇಲ್ ಮಾಡಿದೆಯೆಂದು ಭಾರೀ ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ತಾನು ಸ್ವತ: ಅರಬ್ ದೇಶದಲ್ಲಿ ಹಲವಾರು ವರ್ಷಗಳಿಂದ ಬದುಕುತ್ತಿರುವ ಇವರು ಅಲ್ಲಿನ ಸ್ಥಳೀಯ ಭಾಷೆ ಅರೇಬಿಕ್ ಕಲಿತಿದ್ದಾರೆಯೇ? ಮಕ್ಕಳಿಗೆ ಅರೇಬಿಕ್ ಕಲಿಸುತ್ತಿದ್ದಾರೆಯೇ (ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರೆಲ್ಲರು ತಮ್ಮ ಮಕ್ಕಳನ್ನು ಕಳಿಸುವುದು CBSE syllabus "ಇಂಡಿಯನ್ ಸ್ಕೂಲುಗಳಿಗೆ ಅಥವಾ ಅಮೆರಿಕನ್ ಸ್ಕೂಲುಗಳಿಗೆ - ಎಲ್ಲೂ ಅರೇಬಿಕ್ ಕಲಿಸುವುದಿಲ್ಲ) ಎಂದು ಪ್ರಶ್ನಿಸಬೇಕಾಗುತ್ತದೆ.

ಇತ್ತ ಇಂಟರನೆಟ್ಟಿನಲ್ಲಿ ಕನ್ನಡ ಪರ ಬೊಬ್ಬೆ ಹಾಕುವ ಐಟಿ ಬಿಟಿ ಅಥವಾ ಕನ್ನಡ ಪತ್ರಕರ್ತರು ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ? ತಾವೇ ಎಲ್ಲೋ ಪರ ರಾಷ್ಟ್ರಗಳಲ್ಲಿ ಸ್ಠಳೀಯ ಭಾಷೆ ಕಲಿಯದೆ ಜೀತದಾಳುಗಳಾಗಿ ಬದುಕುತ್ತಿರುವ ಈ NRIಗಳಿಗೆ ಕನ್ನಡೇತರರು ಕನ್ನಡ ಕಲಿಯಲೇಬೇಕೆಂಬ ಹಠವಾದರೂ ಏಕೆ?

ಹೀಗೆ ಗಾಜಿನ ಮನೆಯಲ್ಲಿ ಕುಳಿತಿರುವವರು ಯಾವನೋ ರಾಬಿನ್ ಚುಗ್ ನ ಕಂಪೆನಿ ಹೆಸರನ್ನು ಬ್ಲಾಗುಗಳಲ್ಲಿ ಹಾಕುವುದು, ಅವನಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುವುದು, ಅವನ ಕಂಪೆನಿ HRಗೆ ಫೋನ್ ಮಾಡಿ ಅವನನ್ನು ಕೆಲಸದಿಂದ ತೆಗೆಯುವಂತೆ ಒತ್ತಾಯ ಮಾಡುವುದು - ಇದು ಯಾವ ಕನ್ನಡ ಪ್ರೇಮ ಸ್ವಾಮೀ?

ನಾಳೆ ಮಂಗಳೂರು, ಉಡುಪಿಯವರು "ಹೊರಗಿನವರು ಇಲ್ಲಿ ಬದುಕಬೇಕಾದರೆ ತುಳು/ಕೊಂಕಣಿಯನ್ನು ಒಂದು ವರ್ಷದೊಳಗೆ ಕಲಿಯುವುದು ಕಡ್ಡಾಯ" ಎಂದು ಚಳುವಳಿ ಮಾಡಿದರೆ ಉಗ್ರ ಕನ್ನಡ ಓರಾಟಗಾರರು ಏನ್ನೆನ್ನುತ್ತಾರೋ?

ಹೇಳೀ ಕೇಳೀ ಮುಖ್ಯಮಂತ್ರಿ ಚಂದ್ರು ಒಬ್ಬ ರಾಜಕಾರಣಿ - populist ಹೇಳಿಕೆಗಳನ್ನು ನೀಡುವ ಸಂವಿಧಾನಬದ್ಧವಲ್ಲದ "ಕನ್ನಡ ಅಭಿವೃದ್ದಿ ಪ್ರಾಧಿಕಾರ"ವೆಂಬ ಹಲ್ಲಿಲ್ಲದ ಸಂಸ್ಠೆಯ ಅಧ್ಯಕ್ಷ. ಸದಾ ಸುದ್ದಿಯಲ್ಲಿರಲು ಇಂತಹ ಹೇಳಿಕೆಗಳನ್ನು (ಒಂಥರಾ ಹೇಳಿಕೆಗಳಲ್ಲೇ ಹೀರೋ ಆಗುತ್ತಿರುವ ಲೋಕಾಯುಕ್ತ ಸಂತೋಷ ಹೆಗ್ಡೆಯವರಂತೆ!) ನೀಡುತ್ತಿರುವುದು ಅನಿವಾರ್ಯ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂತಹ ತುಘಲಕ್ ಯೋಜನೆಗಳನ್ನು ಸರಕಾರಕ್ಕೆ recommend ಮಾಡಬಹುದಷ್ಟೇ. ಯಾವುದೇ ಶಾಸನ ಸಭೆ ಯಾ ಸರಕಾರ ಚಂದ್ರು ಅವರ ಸಂವಿಧಾನದ ಮೂಲಭೂತ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿರುವ recommendation ಒಪ್ಪುವುದು ಸಾಧ್ಯವೇ ಇಲ್ಲ - ಒಪ್ಪಿದರೂ ನ್ಯಾಯಾಲಯಗಳು ಅವನ್ನು ಒಪ್ಪುವುದು ಕಷ್ಟ.

ಅದು technicalityಯಾದರೆ, ಇನ್ನು economic impact ಬಗ್ಗೆ ಯೋಚಿಸಿದ್ದಾರೆಯೇ? ಈ ಎಲ್ಲಾ ಕಂಪೆನಿಗಳು ಬಾಗಿಲು ಮುಚ್ಚಿ ಹೋದರೆ ಅದರ ಹೊಡೆತ ಬೀಳುವುದು ಬಡ ಕನ್ನಡಿಗರಷ್ಟೇ. ಯಾಕೆಂದರೆ ಈ ಐಟಿ ಬಿಟಿಗಳು ಜರ್ಮನಿ, ಅಮೆರಿಕಾ ಎಂದು ಬುರ್ರೆಂದು ಹಾರಿಹೋಗುತ್ತಾರೆ. ಪ.ರಾಮಚಂದ್ರರಂತವರು ಕೊಲ್ಲಿ ರಾಷ್ಟ್ರಗಳಲ್ಲಿ ಹಾಯಾಗಿ ತಮ್ಮ ಜೀತದ ಕೆಲಸದಲ್ಲಿ ಮಗ್ನರಾಗುತ್ತಾರೆ. ಆದರೆ ಮುಚ್ಚಿದ ಕಂಪೆನಿಯ ಬಡ ಸೆಕ್ಯೂರಿಟಿ ಗಾರ್ಡುಗಳು, ಡ್ರೈವರುಗಳು, ಕ್ಯಾಂಟೀನ್ ಹುಡುಗರು ತಮ್ಮ "ಕನ್ನಡ ಹೊಟ್ಟೆ" ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಳ್ಳಬೇಕಷ್ಟೇ.

ಭಾರತದ ಸಂವಿಧಾನ ಭಾರತೀಯ ಪ್ರಜೆಗಳೆಲ್ಲರಿಗೂ ದೇಶದೊಳಗೆ ಎಲ್ಲಿ ಬೇಕಾದರೂ ಹೋಗಿ ನೆಲೆಸುವ, ತಮ್ಮ ಭಾಷೆ ಸಂಸ್ಕೃತಿ ಆಚರಿಸುವ ಮೂಲಭೂತ ಹಕ್ಕು ನೀಡಿದೆ. ಇದನ್ನು ತಿಳಿದೂ ಅಥವಾ ತಿಳಿಯದೆಯೋ ಈ ಇಂಟರನೆಟ್ಟಿನ NRI, ಕನ್ನಡ ತಾಲಿಬಾನಿಗಳು ತಮ್ಮ ಮನೆಯಲ್ಲಿ, ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಧೈರ್ಯ ತೋರಿಸಲಿ. ಪ್ರತಿ ವರ್ಷ ಡಜನುಗಟ್ಟಳ್ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ - ಮುಂದಿನ ಪೀಳಿಗೆಯೇ ಕನ್ನಡ ಎಂದರೆ ಏನು ಎಂದು ಪ್ರಶ್ನಿಸುವ ಪರಿಸ್ಥಿತಿ ಇಂದಿದೆ.

ಇಂತಹ ಮುಖ್ಯವಾದ ವಿಷಯಗಳನ್ನು ಚರ್ಚಿಸುವ ಬದಲು ಯಾರೋ ತನ್ನ ಖಾಸಗಿ ಫೇಸ್ ಬುಕ್ಕಿನಲ್ಲಿ ಏನೋ ಕಮೆಂಟು ಮಾಡಿದ ಎಂದು ಅವನಿಗೆ ಜೀವ ಬೆದರಿಕೆ, ಅವನ ಕಂಪೆನಿಯ HR ವಿಭಾಗಕ್ಕೆ ದೂರು ಕೊಟ್ಟು ಅವನನ್ನು ಕೆಲಸದಿಂದ ತೆಗೆದು ಹಾಕುವಂತೆ ಬೆದರಿಕೆ ಹಾಕುವ ತನಕ ಈ ವಿಷಯವನ್ನು ಎಳೆದಿರುವುದು ತಾಲಿಬಾನಿತನವಲ್ಲದೆ ಮತ್ತೇನು?

ಈ ಇಂಟರನೆಟ್ಟು ಗೂಂಡಾಗಿರಿ ನಾಯಕತ್ವ ವಹಿಸಿದ ಹೊಳೇನರಸೀಪುರ ಮಂಜುನಾಥ ತಿಮ್ಮಯ್ಯ - ಈ ವ್ಯಕ್ತಿಯೂ ಅರಬ್ ರಾಷ್ಟ್ರಗಳಲ್ಲಿ ಎಷ್ಟೋ ವರ್ಷ ದುಡಿದರೂ ಅರೇಬಿಕ್ ಕಲಿತ್ತಿದ್ದಾರೆಯೇ ಎಂದು ಕೇಳಬೇಕಾಗಿದೆ.

ಪೇಜ್ ಹಿಟ್ ದುರಾಶೆಯಲ್ಲಿ ಉದ್ರೇಕಕಾರಿ ಬರಹಗಳನ್ನು ಪ್ರಕಟಿಸಿ ಅಂತರ್ಜಾಲದ Mobಗಳನ್ನು ಛೂ ಬಿಡುವ "ಸಂಪಾದಕೀಯ" ಬ್ಲಾಗ್ ಮತ್ತಿತರ motive ಓಕೆ ಎನ್ನೋಣ - ಆದರೆ ಪ.ರಾಮಚಂದ್ರ, ಹೊಳೇನರಸೀಪುರ ಮಂಜುನಾಥರಂತಹ otherwise perfectly reasonable ಜನ, ತಾವು ಗಾಜಿನ ಮನೆಯಲ್ಲಿ ಕುಳಿತ್ತಿದ್ದರೂ ಇಂಟರನೆಟ್ಟಿನಲ್ಲಿ ಭಾಷಾಂಧರಾಗಿ ತಾಲಿಬಾನಿಗಳ ತರಹ ವರ್ತಿಸುವುದು ಕಂಡಾಗ ಬೇಸರವಾಗುತ್ತದೆ.

*************
ಅಂದ ಹಾಗೆ ಕ.ರಾ.ವೇ.ಯ ನಾರಾಯಣ "ರೋಲ್ ಕಾಲ್" ಗೌಡರು ಏಕ್ ದಂ ತಣ್ಣಗಾಗಿ ಹೋಗಿರುವುದನ್ನು ಗಮನಿಸಿದ್ದೀರೆಯೇ? ತನ್ನ ಸ್ವಜಾತಿ ಬಾಂಧವ ಅಶೋಕ ಗೃಹ ಮಂತ್ರಿಯಾದ ಕೂಡಲೇ ನಾರಾಯಣ ಗೌಡರು ಗಪ್ ಚುಪ್! ಒಂದು ಮೂಲದ ಪ್ರಕಾರ ಕರಾವೇಯ ಪುಂಡರ ಮೇಲಿರುವ ಕೇಸುಗಳನ್ನು ತೆಗೆಯುವ ಭರವಸೆ ಅಶೋಕರಿಂದ ದೊರೆತಿದೆಯಂತೆ. ಇನ್ನೊಂದು ಮೂಲದ ಪ್ರಕಾರ ತನ್ನ ಆಡಳಿತದಲ್ಲಿ ಕರಾವೇ ಯಾವುದೇ ಗೂಂಡಾಗಿರಿ ಮಾಡದೇ ಇರಲು ಅಶೋಕರಿಂದ ಗೌಡರಿಗೆ ಅದೆಷ್ಟೋ ಕಪ್ಪ ಕಾಣಿಕೆ ಸಂದಾಯವಾಗಿದೆಯಂತೆ. ಏನೇ ಇರಲಿ ಕರಾವೇ ಪುಂಡರ ದಾದಾಗಿರಿ, ಪುಂಡಾಟ ತಣ್ಣಗೆ ಆಗಿರುವುದಂತೂ ನಿಜ!

21 comments:

  1. Saleem AhmedJune 19, 2011

    ಸರಿಯಾಗಿ ಬರ್ದಿದ್ದೀಯ ಮರೀ and welcome back.

    ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಕಳಿಸುವ ಈ hypocrite ಕನ್ನಡ ಓರಾಟಗಾರರು ತಮ್ಮ ಮನೆಯ ಕೆಲಸದವಳ, ಡ್ರೈವರುಗಳ ಮಕ್ಕಳು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಹೋಗಲಿಯೆಂದು ಇಂಟರ್ನೆಟ್ಟಿನಲ್ಲಿ ಒತ್ತಾಯ ಮಾಡುವುದು ಹಾಸ್ಯಾಸ್ಪದ.

    ReplyDelete
  2. ಅಜಯJune 19, 2011

    ಕನ್ನಡಿಗರು ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕಾಗಿರುವುದನ್ನೂ ಇಲ್ಲಿ ಯೋಚಿಸಬೇಕಾಗುತ್ತದೆ. ಯಾವ ಸಂವಿಧಾನ ಇದೆ ಈ ದೇಶದಲ್ಲಿ? ಕನ್ನಡ ಮಾತಾಡುವುದನ್ನು ಕಲಿಯುವುದಕ್ಕೂ, ಕನ್ನಡ ಮಾಧ್ಯಮದಲ್ಲಿ ಓದುವುದಕ್ಕೂ ವ್ಯತ್ಯಾಸವಿದೆ. ಬೇರೆ ದೇಶಗಳಿಗೆ ಹೋದವರು ಅಲ್ಲಿನ ಭಾಷೆಯನ್ನು ತಕ್ಕಮಟ್ಟಿಗೆ ಮಾತಾಡುವುದನ್ನು ಕಲಿತೇ ಇರುತ್ತಾರೆ. ನೀವು ಹೆಸರಿಸಿದ ವ್ಯಕ್ತಿಗಳು ಅರೇಬಿಕ್ ಅಥವಾ ಅಲ್ಲಿನ ಸ್ಥಳೀಯ ಭಾಷೆ ಕಲಿತಿಲ್ಲ ಎಂಬುದು ನಿಮಗೆ ಹೇಗೆ ಗೊತ್ತು? ಅವರನ್ನು ಮಾತಾಡಿಸಿದ್ದೀರೆ ನೀವು? ವಲಸಿಗರು ಅಲ್ಲಿನ ಭಾಷೆ ಕ್ರಮೇಣ ಹಲವಾರು ವರ್ಷಗಳಲ್ಲಿ ಕಲಿಯುಬೇಕೆನ್ನುವುದು ಸಹಜ . ಅದು ಅವರು ಅಲ್ಲಿನ ಮುಖ್ಯವಾಹಿನಿಗಳಲ್ಲಿ ಸೇರಲು ಅನುಕೂಲವಾಗುತ್ತದೆ. ಇಲ್ಲಿ ಆ ಉತ್ತರಭಾರತೀಯನನ್ನು ಅಥವಾ ಅವನ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲು ಯಾರೂ ಕೇಳಿಲ್ಲ. ಆತನಿಗೆ ಜೀವಬೆದರಿಕೆ ಹಾಕಿದ್ದಾರೆ ಯಾರಾದರೂ ಎಂಬುದಕ್ಕೆ ನಿಮ್ಮಲ್ಲಿ ಪುರಾವೆ ಇದೆಯೇ? ಕನ್ನಡಿಗರಿಗೆ ಕೆಲಸ ಸಿಗುವುದಿಲ್ಲ ಎನ್ನುವುದಕ್ಕೂ ವಲಸಿಗನೊಬ್ಬ ಕನ್ನಡವನ್ನು ಬೈದಿರುವುದನ್ನು ನೋಡಿಕೊಂಡು ಸುಮ್ಮನೇ ಕೂರುವುದಕ್ಕೂ ಏನು ಸಂಬಂಧ? ವಲಸಿಗರಿಗೆ ಕನ್ನಡ ಕಲಿಯಿರಿ ಎಂದರೆ ಎಲ್ಲಾ ಕಂಪನಿಗಳು ಬೆಂಗಳೂರು ಬಿಟ್ತು ಬೇರೆ ಕಡೆ ಹೋಗಿಬಿಡುತ್ತದೆ ಎನ್ನುವುದು ನಿಮ್ಮ ಹಾಸ್ಯಾಸ್ಪದ ವಾದವಾಗಿದೆ. ಅವು ಜಪಾನಿಗೋ ಜರ್ಮನಿಗೋ ಹೋದರೆ ಅಲ್ಲಿ ಅದೇ ಭಾಷೆಯಲ್ಲಿ ವ್ಯವಹರಿಸಬೇಕಾಗುತ್ತದೆ ಎಂಬುದೂ ಗೊತ್ತಿರಲಿ. ಸ್ವಾಭಿಮಾನ ಬಿಟ್ಟು ಸಂವಿಧಾನದ ಹೆಸರು ಹೇಳಿಕೊಂಡು ನೀವು ಹೀಗೆ ಬರೆದಿರುವು ಸೋಗಲಾಡಿ ರಾಷ್ಟ್ರೀಯತೆಯ ಲಕ್ಷಣ.

    ReplyDelete
  3. AnonymousJune 19, 2011

    It is possible convey one's view on the subject matter without using derogatory comments and unparliamentarily language and I had pointed on the derogatory comments and unparliamentary language of migrant software engineers on Kannada language.

    I do admit I am a Kannadaabimaani and may be a Kannada taalibhaani in your view.

    Regards

    P.Ramachandra

    ReplyDelete
  4. ಸನ್ಮಾನ್ಯ ರಾಕೇಶ ಮಥಾಯಿಸ್,

    http://kshakirana.blogspot.com/2011/06/blog-post.html ತಮ್ಮ ಬ್ಲಾಗಿನಲ್ಲಿ ತಾವು ಬರೆದಿರುವ ಅಪ್ಪಟ ಕನ್ನಡಾಭಿಮಾನಿ ಬರಹಕ್ಕೆ ನನ್ನ ಪ್ರತ್ಯುತ್ತರ ಹೀಗಿದೆ ನೋಡಿರಿ.

    "ನಾನೊಬ್ಬ ಮಾಧ್ಯಮದ ವಿಧ್ಯಾರ್ಥಿ. ನನ್ನ ಸುತ್ತಮುತ್ತ ಮಾಧ್ಯಮ ಪ್ರಪಂಚದಲ್ಲಿ ನಡೆಯುತ್ತಿರುವ ಜಾತೀಯತೆ, ಲಾಬಿ, ಭ್ರಷ್ಠಾಚಾರ ನೋಡಿ ಕರ್ನಾಟಕ ಮಾಧ್ಯಮ ಲೋಕದ ಮೇಲೆ ಕ್ಷಕಿರಣ ಬೀರುವ ಅಗತ್ಯವಿದೆಯೆಂದೆನಿಸಿ ಪುಟ್ಟ ಪ್ರಯತ್ನ. ಈ ಹಾದಿ ಸುಗಮವಲ್ಲವೆಂಬ ಅರಿವು ನನಗಿದೆ, ಆದರೆ ಹಿಂದಿನ ಕಟ್ಟಳೆ ಪದ್ಧತಿಗೊಳಗಾಗದೆ ಆಗಸವನ್ನೇ ತೆರೆದಿಟ್ಟಿರುವ ಇಂಟರ್ನೆಟ್ ಮಾಧ್ಯಮಕ್ಕೆ ನಾನು ಋಣಿಯಾಗಿದ್ದೇನೆ." ಎ೦ದು ನಿಮ್ಮ ಪರಿಚಯದಲ್ಲಿ ಹೇಳಿಕೊ೦ಡಿರುವ ತಮ್ಮ ಕಣ್ಣಿಗೆ ಹೊರ ರಾಜ್ಯದವರು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ತಳೆದಿರುವ ನಿಲುವು, ತೋರಿಸುತ್ತಿರುವ ಅಸಡ್ಡೆ, ಇವರಿ೦ದಾಗಿ ಅವಕಾಶವ೦ಚಿತರಾಗುತ್ತಿರುವ ಅಸಹಾಯಕ ವಿದ್ಯಾವ೦ತ ಕನ್ನಡಿಗರು ಕಾಣಿಸಲಿಲ್ಲವೇ? ಹೊರರಾಜ್ಯದವರು ಕರ್ನಾಟಕದಲ್ಲಿರಬೇಕಾದರೆ ಕನ್ನಡ ಕಲಿಯಲೇಬೇಕು ಎ೦ದಿದ್ದನ್ನು ಧೈರ್ಯವಾಗಿ ಫೇಸ್ ಬುಕ್ಕಿನ೦ತಹ ಸಾಮಾಜಿಕ ತಾಣದಲ್ಲಿ "ಫಕ್ ಆಫ್" ಎ೦ದಿದ್ದನ್ನು ವಿರೋದಿಸಿದವರು ತಮ್ಮ ಕಣ್ಣಿಗೆ "ಅ೦ತರ್ಜಾಲದ ತಾಲಿಬಾನಿಗಳು" ಎನ್ನುವ ರೀತಿಯಲ್ಲಿ ಕ೦ಡಿರುವುದು ತು೦ಬಾ ಆಶ್ಚರ್ಯಕರವಾಗಿದೆ. ಹಾಗೆಯೇ ತಮ್ಮ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎ೦ದು ಹೇಳಲು ವಿಷಾದವಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯವರು ನಡೆಸಿದ ಕನ್ನಡಪರ ಹೋರಾಟಗಳನ್ನು "ಪು೦ಡಾಟಗಳು" ಅನ್ನುವಷ್ಟು ಪ್ರಬುದ್ಧರಾಗಿದ್ದೀರಲ್ಲ? ತಾವು ಯಾವ ಮಾನದ೦ಡಗಳನ್ನು ಅನುಸರಿಸಿ ಈ ನಿರ್ಧಾರಕ್ಕೆ ಬ೦ದಿರುವಿರಿ ಎ೦ಬುದನ್ನೂ ವಿವರವಾಗಿ ಕನ್ನಡನಾಡಿನ ಜನತೆಗೆ ತಿಳಿಸುವ೦ಥವರಾಗಿ. ಇದೇ ಪ್ರಕರಣ ಪಕ್ಕದ ತಮಿಳುನಾಡಿನಲ್ಲಿಯೋ, ಮಹಾರಾಷ್ಟ್ರದಲ್ಲಿಯೋ ನಡೆದಿದ್ದರೆ ಇಷ್ಟು ಹೊತ್ತಿಗೆ ಹಾಗೆ ಮಾತನಾಡಿದವರನ್ನು ಹೊಡೆದು ಓಡಿಸಿರುತ್ತಿದ್ದರು. ಆದರೆ ಕರ್ನಾಟಕದ ಶಾ೦ತಿಪ್ರಿಯ ಕನ್ನಡಿಗರು ಅವರಾಡಿದ ತಪ್ಪು ಮಾತಿಗೆ ಕ್ಷಮಾಪಣೆ ಕೇಳುವ೦ತೆ ಅವರನ್ನು ಒತ್ತಾಯಿಸಿದ್ದಾರೆಯೇ ಹೊರತು ನೀವು ಹೇಳಿರುವ೦ತೆ ಜೀವ ಬೆದರಿಕೆ ಹಾಕಿರುವುದಿಲ್ಲ. ಕನ್ನಡಿಗರಲ್ಲಿನ ಭಾಷಾಭಿಮಾನದ ಕೊರತೆಯೇ ಇ೦ದು ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎನ್ನುವುದಕ್ಕೆ ನಿಮ್ಮ ಬರಹ ಒ೦ದು ತಾಜಾ ಉದಾಹರಣೆಯಾಗಿದೆ.

    ಇನ್ನು ತಾವು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಒ೦ದೊ೦ದಾಗಿ ಉತ್ತರಿಸುತ್ತೇನೆ.

    ೧) ನಾನು ಓದಿರುವುದು ಒ೦ದನೆಯ ತರಗತಿಯಿ೦ದ ಪದವಿಯವರೆಗೆ - ನನ್ನ ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ.
    ೨) ನನ್ನ ಮಕ್ಕಳು ಓದಿರುವುದು ಒ೦ದನೆಯ ತರಗತಿಯಿ೦ದ ಹತ್ತನೆಯ ತರಗತಿಯವರೆಗೂ - ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ.
    ೩) ನಾನು ಅರಬ್ ರಾಷ್ಟ್ರದಲ್ಲಿ ನೌಕರಿಯ ನಿಮಿತ್ತ ಇದ್ದಾಗ ದಿನನಿತ್ಯದ ಬಳಕೆಗೆ ಬೇಕಾಗುವಷ್ಟು ಅರೇಬಿಕ್ ಕಲಿತಿದ್ದೇನೆ, ಅಲ್ಲಿನವರು ನನಗೆ ಅರೇಬಿಕ್ ಕಲಿಯಿರಿ ಎ೦ದಾಗ "ಫಕ್ ಆಫ್" ಎ೦ದು ಯಾವ ಸ೦ದರ್ಭದಲ್ಲಿಯೂ ಹೇಳಿಲ್ಲ.
    ೪) ನೀವ೦ದ೦ತೆ ಕೊಲ್ಲಿ ರಾಷ್ಟ್ರಗಳ ಆಯಿಲ್ ಕ೦ಪನಿಗಳಲ್ಲಿ ಕೆಲಸವಿಲ್ಲದೆ ಯಾರೂ ಸುಮ್ಮನೆ ಕುಳಿತು ಸ೦ಬಳ ಪಡೆಯುವುದಿಲ್ಲ, ಬದಲಿಗೆ ಸುಡುವ ೪೫ ರಿ೦ದ ೫೦ ಡಿಗ್ರಿ ತಾಪಮಾನದಲ್ಲಿ ಬೆವರು ಬಸಿದು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿ ಸ೦ಪಾದನೆ ಮಾಡಬೇಕಾಗಿರುತ್ತದೆ. ಅಲ್ಲಿ ಅ೦ತರ್ಜಾಲ ಸ೦ಪರ್ಕ ನಮ್ಮ ಕೆಲಸಗಳಲ್ಲಿ ಅತ್ಯವಶ್ಯಕವಾಗಿರುತ್ತದೆ.
    ೫) ಸ೦ಪಾದಕೀಯದವರು ಅ೦ತರ್ಜಾಲದಲ್ಲಿ ಮಾಡುತ್ತಿರುವ ವೈಚಾರಿಕ ಕ್ರಾ೦ತಿಯನ್ನು ತಾವು ಅರ್ಥ ಮಾಡಿಕೊಳ್ಳಲು ಯತ್ನಿಸದೆ ನಿ೦ದಿಸಿರುವುದು ನಿಮ್ಮ ಎಳಸುತನಕ್ಕೆ ದಿವ್ಯ ಉದಾಹರಣೆಯಾಗಿದೆ.
    ೬) ನೀವು ಹೇಳಿರುವ೦ತೆ "ಇ೦ಟರ್ನೆಟ್ಟು ಗೂ೦ಡಾಗಿರಿ" ಮಾಡುವ ತೆವಲು ನನಗಿನ್ನೂ ಬ೦ದಿಲ್ಲ! ಕನ್ನಡಪರವಾಗಿ ಮಾತನಾಡಿದ್ದನ್ನು "ಗೂ೦ಡಾಗಿರಿ" ಅನ್ನುವ ನಿಮ್ಮ ಬುದ್ಧಿವ೦ತಿಕೆಗೆ ಏನನ್ನಬೇಕೋ ಅರ್ಥವಾಗುತ್ತಿಲ್ಲ.

    ನೀವು ನಿಜವಾಗಲೂ ಮಾಧ್ಯಮ ಪ್ರಪ೦ಚದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳನ್ನು ಬಯಲಿಗೆಳೆದು ಕ್ಷಕಿರಣ ಬೀರುವ ಉದ್ಧೇಶವಿದ್ದಲ್ಲಿ ಮೊದಲು ವೈಚಾರಿಕತೆಯನ್ನು, ಪ್ರಬುದ್ಧವಾಗಿ ಚಿ೦ತಿಸುವುದನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಇನ್ನು ಮು೦ದಾದರೂ ಇ೦ತಹ ಬಾಲಿಶ ಬರಹಗಳಲ್ಲಿ ಸಮಯ ವ್ಯರ್ಥ ಮಾಡದೆ ಅರಿವಿನತ್ತ, ಜ್ಞಾನದತ್ತ ತಮ್ಮ ಹೆಜ್ಜೆಯನ್ನಿಡಬೇಕಾಗಿದೆಯೆ೦ದು ತಿಳಿಸಲು ವಿಷಾದಿಸುತ್ತೇನೆ.

    ಹೊಳೆನರಸೀಪುರ ಮ೦ಜುನಾಥ.
    ಬೆ೦ಗಳೂರು.

    ReplyDelete
  5. AnonymousJune 19, 2011

    samadana, neevu tulu nadinalli kannadigaranu nodo bage namagu gothu. aadaru nimage bengalurinalli jaga kotirovaga swalpa yochisi. yeno tulu kali andu helitiralla?

    Nimage Mumbai bage iro preethi bengalurina bagge illa anodo gothu.

    Nimma alochane nimma swantadu aadaru nammanu navu bitu koduvidu sariyalla.

    omme tamil nadige hogi banni aaga arta vadaru aagabahudu.

    ReplyDelete
  6. "ಕೆಲಸವಿಲ್ಲದ ಬ್ಲಾಗರುಗಳು"....well said

    ReplyDelete
  7. S C DineshJune 19, 2011

    ಸಕ್ಕತ್ತಾಗಿದೆ ಗುರೂ. ಕನ್ನಡ ಬ್ಲಾಗ್ ಲೋಕ ಸ್ವಪ್ರಶಂಸೆಯಲ್ಲಿ ಮುಳುಗಿರುವಾಗ ಇಂಟರನೆಟ್ಟಿನ ಇಂತಹ ಕುರುಡು ಕನ್ನಡಾಭಿಮಾನಿಗಳನ್ನು ಅನಾವರಣಗೊಳಿಸಿ "King has no clothes" ಹೇಳುವ ಧೈರ್ಯ ತೋರಿದ್ದು ಭೇಷ್. ತಾವೆಲ್ಲಾ ಇಂಗ್ಲಿಷ್ ಕಲಿತು ಕೈ ತುಂಬಾ ಹಣ ತರುವ ಐಟಿ ಬಿಟಿ ಯಾ ದೇಶ ವಿದೇಶಗಳಲ್ಲಿ ಕೆಲಸ ಮಾಡಬೇಕು, ಆದರೆ ಬಡವರು ಹಿಂದುಳಿದ ವರ್ಗದವರು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಹೋಗಿ ಕನ್ನಡಾಭಿಮಾನ ತೋರಬೇಕೆನ್ನುವ ಈ hypocriteಗಳಿಗೆ ಧಿಕ್ಕಾರ.

    ReplyDelete
  8. ವಿತರ್ಕ ಅಂತ ಒಂದು ವಿಭಾಗ.. ಇಲ್ಲದಿದ್ದರೆ ವಿತಂಡ ಎನ್ನಬಹುದು. ನಮ್ಮ ಕನ್ನಡ ಭಾಷೆಯನ್ನು ಮದರ್ ಟಂಗ್ (ಮಾತೃಭಾಷೆ) ಎಂದು ಹೇಳಿಕೊಂಡು ರಾಬಿನ್ ಹೇಳಿದ್ದನ್ನು ನೀವು ಸಮರ್ಥಿಸಿ ಕೊಂಡರೆ ಸರಿ :) :P

    ReplyDelete
  9. @anonymouus

    Bengalooralli jaga kodalu nivenu bengaloorannu karidi madiddira?

    ReplyDelete
  10. Rakesh,

    I don't agree with all your views but I do agree on the following:

    1. Calling Robin Chugh repeatedly on cell phone even after apology letter was sent is sad - what are these macho Kannada premis trying to prove by threatening an outsider?

    2. Attempt by likes of Holenarsipura Manjunatha Thimayya to call HR Department of Robin's company and threatening them to dismiss Robin Chugh even after Robin's apology - what kind of Kannada prema is this?

    3. If Mu Ma Chandru's hilarious suggestion of every outsider has to learn Kannada is indeed implemented imagine the chaos it can create. Your point on companies closing and moving out of Bangalore is well taken. Imagine headlines in NY Times or Time magazine "Locals force (or "threaten" from what we see now) foreigners to learn Kannada language in Bangalore"

    Problem with people like Holenarasipura Manjunatha and other NRIs is that they suddenly have too much time on their hands when they move out of India and don't know how to productively spend it.

    Since they don't mix with locals or try to assimilate and learn language, they waste their free time online and waiting for any chance to jump on anyone who disagrees with their views. Internet is full of such super-patriotic, fundamentalist (both religious as well as language) fanatics with too much on their hand to spend time on calling HR departments of companies. With availability of Skype one need not even spend a paisa to spoil the life of someone whom you don't even know.

    Just because Holenarasipura Manjunath works as Security Guard he does not become a Sherlock Homes to go around Internet threatening people. Anyone with Google search can be a detective nowadays!

    ReplyDelete
  11. Selvam (Yes, Bangalore born Tamilian)June 19, 2011

    ಹೊಳೇನರಸೀಪುರ ಅವರ ಪ್ರತಿಕ್ರಿಯೆ ನೋಡಿ ಆಶ್ಚರ್ಯವೇನೂ ಆಗಲಿಲ್ಲ. ಇಂಟರನೆಟ್ಟಿನಲ್ಲಿ ಇಂತಹ ಭಾಷಾಂಧ ಕನ್ನಡಿಗರ ದೊಡ್ಡ ಪಡೆಯೇ ಇದೆ. ಸಮೂಹ ಸನ್ನಿಯಂತೆ ಇಂತಹವರನ್ನು ಬೆಂಬಲಿಸಿ ಉಘೇ ಉಘೇಯೆಂದು helpless non-Kannadigas ವಿರುದ್ದ ಛೂ ಬಿಡುವ ದೊಡ್ಡ ಅಂತರ್ಜಾಲ ಪಡೆಯೇ ಇದೆ.

    ಈ ಅಂಧಾಭಿಮಾನಿಗಳ ಪ್ರಕಾರ ಇಂಗ್ಲಿಷ್ ಬೋರ್ಡುಗಳನ್ನು ಪುಡಿ ಮಾಡುವುದು, ರಾಬಿನ್ ಚುಗ್ಗಿನಂತಹವರನ್ನು ಹೆದರಿಸುವುದರಿಂದ ಕನ್ನಡ ಉದ್ದಾರವಾಗುತ್ತದೆ!

    ಒಬ್ಬ apology ಕೇಳಿದ ಮೇಲಾದರೂ ವಿಷಯ ಅಲ್ಲಿಗೆ ಮುಗಿಸಿ ದೊಡ್ಡವರಾಗಬೇಕಿತ್ತು. ಆದರೆ ದೊಡ್ಡ ಕನ್ನಡ ಹೀರೋ ಆಗೋ ಭರದಲ್ಲಿ ಅದು ಬಿಟ್ಟು ರಾಬಿನ್ ಚುಗ್ಗಿನ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಅವನನ್ನು ಕೆಲಸದಿಂದ ತೆಗೆಯಬೇಕೆಂದು ಧಮಕಿ ಹಾಕಿರುವುದು ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಕನ್ನಡ ಪ್ರೇಮವೆಂದಿನಿಸುವುದಿಲ್ಲ.

    ReplyDelete
  12. ಮಂಗಳೂರು ಮಂಜುನಾಥ / Camp USAJune 20, 2011

    ಹೊಳೇನರಸೀಪುರ ಮಂಜುನಾಥರವರೇ,

    ತಮಗೆ ಕೆಲ ಪ್ರಶ್ನೆಗಳು:

    ೧. ಇವತ್ತು ಎಲ್ಲರೂ ಕನ್ನಡ ಕಲಿಯಲೇಬೇಕು ಎನ್ನುತ್ತೀರ - ನಾಳೆ ಬೆಂಗಳೂರಿನಲ್ಲಿರುವವರೆಲ್ಲಾ ಬರೀ ರಾಗಿ ಮುದ್ದೆ ಮಾತ್ರ ತಿನ್ನಬೇಕು, ರಾಗಿ ಮುದ್ದೆ ತಿನ್ನದವರು ಕನ್ನಡ ದ್ರೋಹಿಗಳು ಎಂದು ತಾವು ಹೇಳುತ್ತೀರೇನೋ? "ನಾನು ರಾಗಿ ಮುದ್ದೆ ತಿನ್ನಲ್ಲ, ಬರೀ ಬಂಗುಡೆ ಫಿಶ್ ಪ್ರೈ ತಿನ್ನುತ್ತೇನೆ" ಎಂದು ಬೆಂಗಳೂರಿನಲ್ಲಿರುವ ಮಂಗಳೂರಿಗರು ಹೇಳಿದರೆ ಅವರು ತಮ್ಮ ಪ್ರಕಾರ ಕನ್ನಡ ವಿರೋಧಿ?

    ೨. ಮುಖ್ಯಮಂತ್ರಿ ಚಂದ್ರುರವರ ಬಾಲಿಶವಾದದ ಪ್ರಕಾರ ಹೊರಗಿನವರೆಲ್ಲಾ ಒಂದು ವರ್ಷದೊಳಗೆ ಕನ್ನಡ ಕಲಿಯಲೇಬೇಕು. What about Muslim immigrants from places within Karnataka like Gulbarga, Bidar? ಉತ್ತರ ಕರ್ನಾಟಕದ ಕೆಲವೆಡೆ ಮುಸ್ಲಿಂರಿಗೆ ಉರ್ದು ಬಿಟ್ಟು ಬೇರೆ ಯಾವುದೇ ಭಾಷೆ ಬರುವುದಿಲ್ಲ. ಅಂತಹವರು ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಬಂದವರು ಕನ್ನಡ ಕಲಿಯಲೇಬೇಕೆನ್ನುವುದು ಸಾಧುವೇ?

    ೩. What about foreigners? ಟೊಯೋಟಾ ಕಂಪೆನಿಯೊಂದರಲ್ಲೇ ಎಷ್ಟೋ ಜಪಾನಿ ಪ್ರಜೆಗಳಿದ್ದಾರೆ. (ಅಂದ ಹಾಗೆ ಅವರಲ್ಲಿ ಕೆಲವರು ಯಾವುದೇ ಗೂಂಡಾಗಿರಿಯ ಒತ್ತಡ ಇಲ್ಲದೆ ಕನ್ನಡ ಕಲಿತಿರುವುದು, "ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು" ಹಾಡು ಹಾಡಿರುವುದು ತುಂಬಾ free time ಇರುವ ತಾವು YouTube ನಲ್ಲಿ ನೋಡಿ ತಿಳಿದಿರಬಹುದು) Bosch, Siemens ಕಂಪೆನಿಗಳಲ್ಲಿ ಜರ್ಮನಿ ದೇಶದವರಿದ್ದಾರೆ. ಜಪಾನಿ, ಜರ್ಮನಿ ಪ್ರಜೆಗಳೆಲ್ಲಾ ಕನ್ನಡ ಕಲಿಯಬೇಕು ಎಂದು ಹಠ ಹಿಡಿಯುತ್ತೀರೇನೋ? Foreigners ಬಿಡಿ, ಮೆಟ್ರೋ ಮತ್ತಿರರ ಕಾಮಗಾರಿಗಳಿಗೆ ಉತ್ತರ ಭಾರತದಿಂದ, ಬಾಂಗ್ಲಾ ದೇಶದಿಂದ ಬಂದಿರುವ ಸಾವಿರಾರು ಕೂಲಿ ಕಾರ್ಮಿಕರು ಬೆಂಗಳೂರಲ್ಲಿದ್ದಾರೆ. ಅವರನ್ನೆಲ್ಲಾ ಹೇಗೆ monitor ಮಾಡುತ್ತೀರ?

    ಒಟ್ಟಾರೆ ತಮ್ಮ ವಾದದ ಪ್ರಕಾರ ಭಾರತದೊಳಗೇ ಭಾರತದ ಪ್ರಜೆಗಳು ರಾಜ್ಯಗಳ ನಡುವೆ passport ಉಪಯೋಗಿಸುವ plan ತಮ್ಮದು!

    ತಮ್ಮ ವಾದ ಒಪ್ಪದವರೆಲ್ಲಾ ಕನ್ನಡ ವಿರೋಧಿಗಳು, ಕನ್ನಡದ ದ್ವೇಷಿಗಳು! ರಾಕೇಶ್ ಮಥಾಯಸ್ ನಂತೆ ತಮ್ಮ ಅಂತರ್ಜಾಲದ ಗೂಂಡಾಗಿರಿಯನ್ನು ಯಾರಾದರೂ ಪ್ರಶ್ನಿಸಿದರೆ ಅವರು ಅಪ್ರಬುದ್ಧರು / ಬಾಲಿಶ ವಾದ ಮಾಡುವವರು. ಹಿಟ್ಲರ್ ಹೀಗೇ ತಮ್ಮಂತೇ ವಾದ ಮಾಡಿದ್ದು. ನಾನೇನೋ ರಾಕೇಶ್ ತಮಗೆ unnecessary ಟಾಂಗಿಟ್ಟಿದ್ದಾನೆಯೆಂದು ಯೋಚಿಸುತ್ತಿದ್ದೆ, ಆದರೆ ತಮ್ಮ ಪ್ರತಿಕ್ರಿಯೆ ನೋಡಿದರೆ ತಮ್ಮನ್ನು ತಾಲಿಬಾನಿಗೆ compare ಮಾಡಿದ್ದು ಸರಿಯಾಗಿಯೇ ಇದೆ. ರಾಕೇಶ್ keep up the good work. ಈ ಘಟ್ಟದಕ್ಲೆಗು ಬೇತೆ ಬೇಲೆ ಇಜ್ಜಿ.

    ReplyDelete
  13. AnonymousJune 20, 2011

    REALLY GOOD ARTICLE...SAMPADAKIYA MISUSING INTERNET FACILITY..I AM CURIOUS TO KNOW WHO IS THAT PERSON BEHIND SAMPADAKIYA ANY BODY ANSWR....

    KIRAN RAO

    ReplyDelete
  14. AnonymousJune 20, 2011

    ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಕನ್ನಡ ಕಲಿಯದೆ ಹತ್ತಾರು ವರ್ಷಗಳಿಂದ ಇರುವವರು ಅನೇಕರಿದ್ದಾರೆ. ಆದರೆ ಅವರಿಗೆಲ್ಲಾ ಜೀವ ಬೆದರಿಕೆ ಇದ್ದರೆ ಅವರು ಇಲ್ಲಿ ಉಳಿದಿರುವುದು ಯಾಕೆ? ಕನ್ನಡಿಗರು ಸಹನಾಶೀಲರು ಅದಕ್ಕೆ... ಸನ್ಮಾನ್ಯ ಚಂದ್ರುರವರು ಒಂದು ಪ್ರಸ್ತಾವನೆ ಮಾಡಿದ್ದಕ್ಕೆ ’f*** **f' ಅಂದಿರುವುದು ಸರಿ ಎಂದು ತಮಗೆ ಅನಿಸಿದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮರ್ಯಾದೆಇಲ್ಲ ಎಂದು ತಮ್ಮ ಭಾವನೆಯೇ ? ತಮ್ಮ ಮಾತೃ ಭಾಷೆಯನ್ನು ಪ್ರೀತಿಸುತ್ತಿರುವ ಕನ್ನಡಿಗರಿಗೆ ಮರ್ಯಾದೆ ಇಲ್ಲ ಅಂತಲೆ? ಯಾರಿಗೂ ಒತ್ತಾಯಪೂರ್ವಕವಾಗಿ ಕನ್ನಡ ಕಲಿಯಲು ಯಾರೂ ಬೆದರಿಕೆ ಹಾಕಿಲ್ಲ. ಈ ಪ್ರತಿಭಟನೆ ಶುರುವಾಗಿದ್ದು ಆತ ಅಸಂಬದ್ಧ, ಅಶ್ಲೀಲ ಶಬ್ದದ ಪ್ರಯೋಗಕ್ಕಾಗಿ ಎಂಬುದು ತಮಗೆ ಗೊತ್ತಿರಲಿ...ಕೊನೆಯದಾಗಿ ’ಯಾರಾದರೂ ತಮ್ಮ ’ಕೊಂಕಣಿ ಭಾಷೆ’ಗೆ ಸಾರ್ವಜನಿಕವಾಗಿ ’ಫಕ್ ಆಫ್’ ಎಂದಿದ್ದರೆ ತಾವು ಸುಮ್ಮನೆ ಇರುತ್ತಿದ್ದಿರೆ???????

    ReplyDelete
  15. ಕೆಲಸವಿಲ್ಲದೆ ಬೆ೦ಚ್ ನಲ್ಲಿ ಕೂತು ಕನ್ನಡದ ಬಗ್ಗೆ ಬೊಬ್ಬೆ ಹೊಡೆಯುವ ಐಟಿ ಬಿಟಿ ಮ೦ದಿಯೇ ಇವತ್ತು ಒಳ್ಳೆಯ ಸದಭಿರುಚಿಯ ಕನ್ನಡ ಲೇಖನಗಳನ್ನು, ಕಥೆಗಳನ್ನು, ಕವನಗಳನ್ನು ವೈಚಾರಿಕ ಸುದ್ದಿಗಳನ್ನು ಪೇರಿಸುತ್ತಿರುವುದು ಎ೦ಬುದನ್ನು ತಿಳಿದರೆ ಒಳ್ಲೆಯದು. ಇರಲಿ…
    ಕನ್ನಡೇತರರು ಕನ್ನಡ ಕಲಿಯಬೇಕು ಎನ್ನುವ ವಿಚಾರದ ವಿರುದ್ದ ನಿಮ್ಮ ಲೇಖನವಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅದರ ಬದಲು ಅದನ್ನು ಅನುಮೋದಿಸಿದವರ ವಿರುದ್ದ ನಿಮ್ಮ ವಾಗ್ದಾಳಿ(? :) ) ತಪ್ಪೆ೦ದು ಭಾವಿಸುತ್ತೇನೆ. ಇರಲಿ,……
    ಕನ್ನಡಲ್ಲಿ ಮಾತನಾಡಿ ಎ೦ದರೆ ತಪ್ಪೇನು? ಸಾಧ್ಯವಿಲ್ಲ ಎ೦ಬುದಕ್ಕೆ ಆ ರಾಬಿನ್ ಮಹಾಶಯ ತರ್ಕಬದ್ಧವಾಗಿ ಹೇಳಬೇಕಿತ್ತು ಅಲ್ಲವೇ ಅದರ ಬದಲು ಅಶ್ಲೀಲ ಪದ ಪ್ರಯೋಗದ ಅವಶ್ಯಕತೆ ಏನಿತ್ತು. ಆತ ಅದ್ಭುತ ಪದ ಪ್ರಯೋಗಕ್ಕೆ ನಿಮ್ಮ ಸಮರ್ಥನೆ ಏನು?
    ಒ೦ದು ಪ್ರಾ೦ತ್ಯದಲ್ಲಿ ವಾಸಿಸುವಾಗ ಅಲ್ಲಿನ ಭಾಷೆ ಸ೦ಸ್ಕೃತಿಗೆ ಗೌರವ ಮರ್ಯಾದೆ ಕೊಡಬೇಕಾಗುತ್ತದೆ. ಸ್ಥಳೀಯರೊ೦ದಿಗೆ ವ್ಯವಹರಿಸುವಾಗ ಅವರ ಭಾಷೆಯಲ್ಲೇ ಮಾತನಾಡಲು ಪ್ರಯತ್ನಿಸಿದರೆ ಅಲ್ಲಿನ ಸ೦ಸ್ಕೃತಿಯ ಅರಿವು೦ಟಾಗುವುದು ಸಹಜ. ಅದು ಬಿಟ್ಟು
    ಆ ಪ್ರಾ೦ತ್ಯದಲ್ಲಿನ ಜನರ ಜೊತೆ ಬೆರೆಯಬೇಕಾದರೆ ಅಲ್ಲಿನ ರೀತಿ ರಿವಾಜುಗಳಿಗೆ ಒಗ್ಗಿದಷ್ಟೂ ಅರಿಯುವಿಕೆ ಸುಲಭ. ನನ್ನ೦ತೆಯೆ ನಾನು ಬದುಕುತ್ತೇನೆ ಎ೦ದರೆ ಅವನು ಪರಕೀಯನಾಗಿಬಿಡುತ್ತಾನೆ .
    ತಮಿಳು ಮಹಾಶಯರೊಬ್ಬರು ತಮ್ಮ ಕನ್ನಡಾಭಿಮಾನವನ್ನು ತೋರಿಸಿದ್ದಾರೆ ಸ೦ತೋಷ . ಆದರೆ ಅದೇ ತಮಿಳುನಾಡಿನ ಮೆಡಿಕಲ್ ಶಾಪಿನಲ್ಲಿ ಹಿ೦ದಿಯಲ್ಲಿ ಮಾತನಾಡಿಸಿದರೂ ಸರಿಯಾದ ಉತ್ತರ ಸಿಗುವುದಿಲ್ಲವೆ೦ದು ತಿಳಿದರೆ ಒಳಿತು. (ಇದು ನನ್ನ ಸ್ವ೦ತ ಅನುಭವ) ಇರಲಿ ನಾನು ವ್ಯಕ್ತಿಗತ ಟೀಕೆಗಿಳಿಯಲಾರೆ.
    ನಿಮ್ಮ ಲೇಖ್ಹನ ವಸ್ತುವಿನ ಕುರಿತಾಗಿದ್ದರೆ ಇನ್ನೊ೦ದಿಷ್ಟು ಹೇಳಬಹುದಿತ್ತು ಆದರೆ ಇದು ಕೇವಲ ವ್ಯಕ್ತಿಗತ ಟೀಕೆಯಾಗಿದೆ.
    ದೂರದೇಶದಿ೦ದ/ರಾಜ್ಯದಿ೦ದ ಬ೦ದಿರುವ ವ್ಯಕ್ತಿ ಕೇವಲ ಎರಡೋ ಮೂರೋ ೦ಗಳು ಇಲ್ಲಿರುವವನು ಎ೦ದಾದರೆ ಅವರಿಗೊ೦ದು ರಿಯಾಯ್ತಿ ಕೊಡಬಹುದು ಆದರೆ ವರ್ಷಗಟ್ಟಲೆ ಇಲ್ಲೇ ಇರುವವರಿಗೆ ಯಾವ ರಿಯಾಯ್ತಿಯ ಅವಶ್ಯಕತೆ ಬೇಕಾಗಿಲ್ಲ.
    ಮು ಮ ಚ೦ದ್ರು ರವರಾಗಲಿ ಅಥವಾ ಇನ್ಯಾವ ವೇದಿಕೆಯವರಾಗಲಿ ಅವರದು ಕಾಳಜಿ ಬೆರೆದ ಬಿನ್ನಹವೇ ಪರ೦ತು ಆಗ್ರಹವಾಗಿರಲಿಲ್ಲ. ಆದರೆ ಅದಕ್ಕೆ ಸೊಪ್ಪು ಹಾಕದೆ ಅಶ್ಲೀಲವಾಗಿ ಬೈದ ವ್ಯಕ್ತಿಗೆ ನಿನ್ನದು ತಪ್ಪು ಎ೦ದು ಹೇಳುವುದು ತಪ್ಪಲ್ಲ
    ಇನ್ನು ಅವರಿಗೆ ಬೆದರಿಕೆ ಕರೆ ಬ೦ದಿದೆ ಎನ್ನುವುದು ಇದಕ್ಕೆ ನಿಮ್ಮ ಬಳಿ ಸಾಕ್ಷ್ಯಾಧಾರಗಳಿವೆಯೇ? ಇದ್ದರೆ ದಯವಿಟ್ಟು ತಿಳಿಸಿ. ಅದನ್ನು ಪೋಲೀಸ್ ಗೆ ತಿಳಿಸೋಣ . ತಪ್ಪು ಯಾರು ಮಾಡಿದರೂ ತಪ್ಪೇ.
    ಆದರೆ ಕನ್ನಡವನ್ನು ಕನ್ನಡಿಗರನ್ನು ನಿ೦ದಿಸುವವರ ಬಗ್ಗೆ ನಿಮ್ಮ ವಾದ ಸರಿಯಾದುದಲ್ಲ.
    ಕೆಲಸವಿಲ್ಲದ ಬ್ಲಾಗಿಗರು ಎ೦ಬ ಮಾತನ್ನು ತಿದ್ದಿಕೊ೦ಡರೆ ಒಳಿತು. ವ್ಯಕ್ತಿಗತ ಮಟ್ಟದ ಟೀಕೆ ವಿಮರ್ಶೆಯಾಗದು ಮಿಸ್ಟರ್ ಸೋ ಅ೦ಡ್ ಸೋ
    ಹರೀಶ ಆತ್ರೇಯ

    ReplyDelete
  16. ಆಹಾ. ನಮಸ್ಕಾರ್ರಿ ತಮಗೆ. ಏನು ಒಳ್ಳೆಯ ಹೆಸರು ಕೊಟ್ಟಿರಿ ಪ ನೀವು? ತಾಲಿಬಾನಿಗಳು!!! (ನಗು ತಡೆಯಲಾಗ್ತಾ ಇಲ್ಲ). ರೋಬಿನ್ ಚುಗ್ಹ್ ಅಂತ ಅಪ್ರಬುದ್ಧ ಅನಾಗರಿಕನಿಗೆ ಸಹಕರಿಸುವ ನಿಮ್ಮಂಥವರು ತಾಲಿಬಾನಿಗಲಿಗಿಂಥ ಕ್ರೂರ ಕಸಬ್ ಅಥವಾ ಜಗತ್ತಿಗೆ ಬೆಂಕಿ ಹಚ್ಚಲು ಹೊಂಚು ನಡೆಸುತ್ತಿರುವ ಅಮೇರಿಕಾದ ಮಾಜಿ ಪ್ರಧಾನಿ ಜಾರ್ಜ್ ಬುಶು? ಅಲ್ಲೋ ಮಹರಾಯ ನೀ ಇನ್ನ ಮಾಧ್ಯಮ ವಿಭಾಗದ ವಿದ್ಯಾರ್ಥಿ, ಸ್ವಲ್ಪ ಕಣ್ಣು ಎಲ್ಲ ಕಡೆ ನೆಟ್ಟಗೆ ತಗೆದು ನೋಡಿ ಆಮೇಲೆ ಬರಿಯೋದು ಕಲಿಬೇಕು. ಕನ್ನಡಿಗರನ್ನು ತಾಲಿಬಾನಿಗಳು ಅಂತ ನೀನು ಹೇಳಿರುವುದು, ಆ ಶಿವಸೇನೆ ಉದ್ಧವ ತಾಕ್ರೆ ಹೇಳಿದ ಹಾಗೆ:ಬೆಳಗಾವಿ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವಂತೆ, ಇದು ತಮ್ಮ ಬುದ್ಧಿ ಮಾನ್ಧ್ಯತನ ಹಾಗೂ ಅನನುಭವ ಎದ್ದು ತೋರಿಸ್ತಾ ಇದೆ. ಯಾರೋ ಏನೋ ಹೇಳಿದ್ರು ಅಂತ ಸುಖ ಸುಮ್ಮನೆ ಬರೆಯೋದು ಬಿಟ್ಟು, ಸ್ವಲ್ಪ ನಿಜ ಇದ್ದದ್ದನ್ನು ಬರೀರಿ. ಕರವೇ ಮಾಡಿದಸ್ತು ಕೆಲಸ ತಾವೆನಾದ್ರು ಕನ್ನಡಕ್ಕೋಸ್ಕರ ಮಾಡಿರ ಸಾಹೇಬ್ರೆ? ಇವರನ್ನು ಪುಂಡರು ಅನ್ನೋ ಬದಲು, ಇವರಿಂದ ರಾಜ್ಯದಲ್ಲಿ ಎಷ್ಟು ಉದ್ಧಾರ ಆಗಿದೆ ಅನ್ನೊಕಡೆ ಗಮನ ಹರಿಸಿರ? ಉತ್ತರ ಕರ್ನಾಟಕ ದಾಗ ನೆರೆ ಬಂದಾಗ ಎಷ್ಟು ಜನ ಬಡವರಿಗೆ ಅನ್ನ-ಆಹಾರ ನೀಡ್ಯಾರ, ಮನೆ ಕಟ್ಟಿ ಕೊಡಲು ಧನ ಸಹಾಯ ಮಾಡ್ಯಾರ.ಗಡಿ ಜಿಲ್ಲೆಯಲ್ಲಿ ಮಾರಕವಾಗಿರೋ ಶಿವಸೇನೆ, ಎಂ.ಈ.ಸ ನಂಥ ದರಿದ್ರರಿಗೆ ಹುಚ್ಚು ಬಿಡಿಸ್ಯಾರ. (ಹೇಳಲು ಇನ್ನು ಸಾಕಷ್ಟಿದೆ)
    ಇನ್ನು ಈ ಪತ್ರಿಕೆ "ಬೆಂಗಳೂರು ಮಿರ್ರರ್ " ಅವ್ರು ಮುಖ್ಯ ಮಂತ್ರಿ ಚಂದ್ರು ಅವರ ಹೇಳಿಕೆ ಪ್ರಕಟಿಸಿದಾಗ, ಇವರ ಅಂತರ್ಜಾಲ್ ತಾಣದಲ್ಲಿ ಎಷ್ಟೋ ವಲಸಿಗರು "ಬುಲ್ ಶಿಟ್, ಫಕ್ ಆಫ್" ಅಂತ ಒಳ್ಳೊಳ್ಳೆ ಶಬ್ದ ಬಳಸಿ ಕಾಮೆಂಟ್ ಹಾಕಿದ್ರೆ ಅದನ್ನು ಎಡಿಟ್ ಮಾಡದೆ ಮುದ್ರಿಸೋ ಪತ್ರಿಕೆ ಕನ್ನಡಿಗರ ಕಾಮೆಂತಗಳನ್ನ ಮಾತ್ರ ಎಡಿಟ್ ಮಾಡಿದ್ದೋ ಯಾಕೆ? ನನ್ನ ಪ್ರಕಾರ ನಿಮ್ಮಂಥ ಎಡಿಟರ್ ಗಳೇ (ಅನಾನುಭವಿ, ಪೊಳ್ಳು ಭಾರತೀಯರು) ಇಲ್ಲಿ ಕೆಲಸ ಮಾಡ್ತಾ ಇರ್ತಾರೆ.
    ವೈವಿಧ್ಯತೆಯಲ್ಲಿ ಏಕತೆ ಅಂತ ಹೇಳೋ ನಮ್ಮ ದೇಶದಲ್ಲಿ ವೈವಿಧ್ಯತೆ ಕಳೆದು ಹೋಗ್ತಾ ಇದ್ರೆ, ಈ ಆಂಗ್ಲ ಮಾಧ್ಯಮದವರು ಅದನ್ನ ಮರೆಮಾಡಿ ನಾವು ಭಾರತೀಯರು ಅಂತ ಹೇಳೋಕೆ ನಾಚಿಕೆ ಬರಬೇಕು ಅಲ್ಲವ? ಭಾರತದ ಎಲ್ಲ ೨೨ ಭಾಷೆಗಳು ಸಮಾನ ಗೌರವ ದಿಂದ ನೋಡಬೇಕಾದದ್ದು ಪ್ರತಿ ಪ್ರಜೆಯ ಆದ್ಯ ಕರ್ತವ್ಯ. ಭಾರತೀಯ ನಾಗಿರಲು ಬರಿ ಹಿಂದಿ ಗೊತ್ತಿರಬೇಕು ಅನ್ನೋದು ಹುಚ್ಚುತನ, ನಮ್ಮ ದೇಶಕ್ಕೆ ೨೨ ರಾಷ್ಟ್ರ ಭಾಷೆಗಳು.ಎಲ್ಲರಿಗೂ ತಮ್ಮ ಭಾಷೆಗಳನ್ನು ರಕ್ಷಿಸಿ, ಬೆಳೆಸಿ, ಪೋಷಿಸೋ ಹಕ್ಕು ಸಂವಿಧಾನ ಕಲ್ಪಿಸಿದೆ.ಇಲ್ಲಿ ರೋಬಿನ್ ಚುಗ್ಹ್ ಅವ್ರು ಎಷ್ಟೋ ಗೌರವ ತೋರಿಸಿದ್ದಾರೆ ಅಂತ ನಿಮಗೆ ಗೊತ್ತಲ್ವ? ಇದನ್ನು ಸಮರ್ಥಿಸಿಕೊಂಡು, ನಮ್ಮ ರಾಜ್ಯದಲ್ಲೇ ಕನ್ನಡಿಗರು ಎರಡನೇ ದರ್ಜೆ ಪ್ರಜೆಯಾಗಿರಲಿ ಅನ್ನೋ ತಮ್ಮ ವಾದಕ್ಕೆ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂಥದ್ದು!!
    ತಮ್ಮ ಈ ನಿಲುವು ನೋಡಿದ್ರೆ ಗೊತ್ತಾಗುತ್ತೆ ತಾವೆಂಥ ಮಾಧ್ಯಮದಲ್ಲಿ ಕೆಲಸ ಮಾಡ್ತಾ ಇದ್ದೀರಾ ಅಂತ!!

    ReplyDelete
  17. ದೀರ್ಘ ಕಾಲದ ಬಳಿಕ ತಾವು ಮತ್ತೆ ಲೇಖಿಸಿದ್ದೀರಿ. ಸಂತೋಷದ ವಿಷಯ. ತಮ್ಮ principlesಗಳನ್ನು ಯಾರಾದರೂ ಒಪ್ಪಲೇಬೇಕು. ಆದರೆ ಈ principleಗಳು ಕರ್ನಾಟಕಕ್ಕೆ ಮಾತ್ರ apply ಆಗುತ್ತಿರುವದು ದುಃಖದ ಸಂಗತಿ. ನಮ್ಮೂರಿಗೆ ಬಂದ ಆಗಂತಕರು ನನ್ನೊಡನೆ ಕನ್ನಡೇತರ ಭಾಷೆಯಲ್ಲಿ ಮಾತನಾಡಿದಾಗ, ನಾನು ಅವರಿಗೆ ಅವರ ಭಾಷೆಯಲ್ಲಿಯೇ (i.e.ಹಿಂದಿ)ಮಾಹಿತಿ ಹೇಳುತ್ತೇನೆ. ಆದರೆ ತಲೆಮಾರುಗಳಿಂದ ಇಲ್ಲಿರುವ ಉತ್ತರ ಪ್ರದೇಶದವರು, ಮಾರವಾಡಿಗಳು, ಗುರ್ಖಾಗಳು ಕನ್ನಡವನ್ನು ಕಲಿಯಲು ಏನೂ ಪ್ರಯತ್ನಿಸದೆ, ನನ್ನೊಡನೆ ಹಿಂದಿಯಲ್ಲಿ ಮಾತನಾಡಲು ಬಯಸುತ್ತಾರೆ. ನಾನು ಕನ್ನಡದಲ್ಲಿ ಮಾತನಾಡಿದರೆ, ನನ್ನನ್ನು ಗುಗ್ಗೂ ಎನ್ನುವಂತೆ ನೋಡುತ್ತಾರೆ. ನಾನು ಮಹಾರಾಷ್ಟ್ರಕ್ಕೆ ಹೋದಾಗ, ಅಲ್ಲಿಯ ಜನ ಹಿಂದಿಯಲ್ಲೂ ಸಹ ನನ್ನೊಡನೆ ಮಾತನಾಡಲು ತಯಾರಿರಲಿಲ್ಲ. ಒಂದು ಸಲ ನನ್ನ ಪುಟ್ಟ ತಮ್ಮ ಕೊಲ್ಲಾಪುರದಲ್ಲಿಯ ಪೋಲೀಸನಿಗೆ ಹಿಂದಿಯಲ್ಲಿ ದಾರಿ ಕೇಳಿದಾಗ, ಆತ "ಇಥ ಮರಾಠೀ ಚಾಲತೇತ, ಬಾಳಾ" ಎಂದು ಮಾರುತ್ತರಿಸಿದ್ದ. ಇನ್ನು ತಮಿಳುನಾಡಿನಲ್ಲಂತೂ ಕರುಣಾನಿಧಿಯೇ ಗತಿ. ಇಂತಹ ಭಾಷಾ ದುರಭಿಮಾನವು ತಪ್ಪು ಎಂದೇ ನಾನು ಹೇಳುತ್ತೇನೆ. ಕನ್ನಡಿಗರಿಗೆ ಭಾಷಾ ದುರಭಿಮಾನ ಬೇಕಿಲ್ಲ. ಆದರೆ ಕನ್ನಡೇತರರು ಕರ್ನಾಟಕದಲ್ಲಿಯೇ ಪುಂಡಾಟ ಮಾಡಿದರೆ, ಪ್ರತಿರೋಧಿಸದೆ ಸುಮ್ಮನೆ ಕುಳಿತುಕೊಳ್ಳಬೇಕೆ?

    ReplyDelete
  18. AnonymousJune 20, 2011

    ನಿಮ್ಮ್೦ಥವರು ಹೆಚ್ಚಾಗಿದ್ದರಿ೦ದಲೆ ಇವತ್ತು ಇ ಪರಿಸ್ತಿತಿ ಬ೦ದಿರುವುದು, ಒ೦ದು ವಿಷಯ ಗಮನಿಸಿ ನಾವು ಯಾರಿಗು ಅವರ ಆಫ್ಹೀಸ್ ನಲ್ಲಿ ಕನ್ನಡ ಮಾನನಾಡಿ ಅ೦ತ ಹೇಳಿಲ್ಲ ಅವರು ಜನ ಸಾಮನ್ಯರೊ೦ದಿಗೆ ಮಾತನಾಡುವಾಗ ಅಷ್ತೆ,
    ನೀವೆ ಹೇಳಿದ ಹಾಗೆ ಆಟೋ ಡ್ರೈವರ್, ಕೂಲಿ ಮಾಡುವವರು ಹಿ೦ದಿ ಅಥವಾ ಇ೦ಗ್ಲಿಷ್ ಮಾನನಾಡಲು ಸಾದ್ಯವೆ?
    ಅದರಲ್ಲು ತು೦ಬಾ ಜನ ಪ್ರತ್ಯೆಕ ಕುಟು೦ಬ ವ್ಯ್ವವಸ್ಠೆಯಲ್ಲಿರುವವರು ಅವರಿಗೆ ಎನಾದರು ಹೆಚ್ಚು ಕಮ್ಮಿ ಆದರೆ ಅದನ್ನು ಅವರು ವಿವರಿಸಲಾದರು ಸ್ಥಳೀಯ ಬಾಷೆಯ ಅಗತ್ಯವಿದೆ ಹೊರತು ನಾವೇನು ಅವರನ್ನು ಕನ್ನಡ ಪ೦ಡಿತರಾಗಲು ಹೇಳಿಲ್ಲ
    ಮತ್ತು ಮುಖ್ಯ ಮ೦ತ್ರಿ ಚ೦ದ್ರು ಹೇಳಿರುವುದು ಬರಿ ಇನ್ನು ಸಲಹೆ ಅಷ್ತೆ ಯಾಕೆ೦ದರೆ ನಿಮಗೆ 3 ಬೆಕೆ೦ದೆರೆ ನೀವು 6
    ಕೇಳಬೇಕು ನಮ್ಮ ಸರ್ಕಾರದ ಹತ್ತಿರ ಅದು ಬುದ್ದಿವ೦ತರ ಲಕ್ಷಣ ಅದೆಲ್ಲಾ ನಿಮಗೆ ಅರ್ಥವಾಗುವುದಿಲ್ಲ ನೀವಿನ್ನು ಕಲಿಯಬೇಕಾದುದು ಬಹಳ ಇದೆ.

    ReplyDelete
  19. ಇಲ್ಲಿ ಪ್ರತಿಕ್ರಿಯಿಸಿರುವ ಎಲ್ಲ ಕನ್ನಡಾಭಿಮಾನಿಗಳಿಗೂ ಅನ೦ತಾನ೦ತ ಧನ್ಯವಾದಗಳು. ಒ೦ದು ವಿಷಯವನ್ನು ಇಲ್ಲಿ ಸ್ಪಷ್ಟೀಕರಣಗೊಳಿಸಬಯಸುತ್ತೇನೆ, ನಾನು ನನ್ನದೇ ಮೊಬೈಲಿನಿ೦ದ, ನನ್ನ ಹಣ ಖರ್ಚು ಮಾಡಿ ರಾಬಿನ್ ಚುಗ್ ಹಾಗೂ ಅವರ೦ತೆಯೇ ಪ್ರತಿಕ್ರಿಯಿಸಿದ್ದ ಪ್ರತಾಪಾದಿತ್ಯ ಸಿ೦ಗ್ ಇಬ್ಬರಿಗೂ ಮಾತನಾಡಿದ್ದೇನೆ. ಅವರು ಮಾಡಿದ ತಪ್ಪನ್ನು ಅವರಿಗೆ ಮನದಟ್ಟು ಮಾಡಿ ಕೊಟ್ಟಿದ್ದೇನೆ. ಅದು ಬಿಟ್ಟು ಯಾವುಡೆ ಪುಕ್ಕಟೆ ಫೋನ್ ಉಪಯೋಗಿಸಿ ಅವರ ಸ೦ಸ್ಥೆಗಳ "ಹೆಚ್ಚಾರ್" ಗಳಿಗೆ ನಾನು ಫೋನ್ ಮಾಡಿಲ್ಲ ಅಥವಾ ಬೆದರಿಕೆ ಹಾಕಿಲ್ಲ! ಇದು ಸತ್ಯಕ್ಕೆ ದೂರವಾದ ಸ೦ಗತಿ. ಇನ್ನು ನನ್ನ ಪ್ರಾಮಾಣಿಕ ಕಳಕಳಿಯ ವಿಚಾರಕ್ಕೆ ಬ೦ದರೆ ನನ್ನ ಮಾತೃ ಭಾಷೆಯನ್ನು, ನನ್ನ ಕನ್ನಡ ನಾಡನ್ನು, ರಾಜಧಾನಿಯಾದ ಬೆ೦ಗಳೂರು ನಗರವನ್ನು ನನ್ನ ತಾಯಿಯ೦ತೆಯೇ ಭಾವಿಸಿ ಬೆಳೆದವನು ನಾನು! ಆಕಸ್ಮಾತ್ ಈ ಮೂರರ ಬಗ್ಗೆ ಯಾರಾದರೂ ಹೀನಾಯವಾಗಿ ಜರಿದರೆ, ನನ್ನ ತಾಯಿಯನ್ನು ಜರಿದ೦ತೆ ಅನ್ನಿಸುತ್ತದೆ. ಕೋಪ ಉಕ್ಕುತ್ತದೆ, ಅವರಿಗೆ ಬುದ್ಧಿ ಕಲಿಸಲು ಬಯಸುತ್ತದೆ. ರಾಬಿನ್ ಚುಗ್ ಮತ್ತು ಪ್ರತಾಪಾದಿತ್ಯ ಸಿ೦ಗರ ಪ್ರಕರಣಕ್ಕೆ ಆ ಭಾವೋದ್ರೇಕವೇ ಕಾರಣವೇ ಹೊರತು ಬೇರೇನಿಲ್ಲ. ಇನ್ನು ತನ್ನ ಭಾಷೆಯನ್ನು, ತನ್ನ ತಾಯಿಯನ್ನು ಯಾರು ಏನೆ೦ದು ನಿ೦ದಿಸಿದರೂ ನನಗೇನೂ ಅನ್ನಿಸುವುದಿಲ್ಲ ಎನ್ನುವ "ಪೊಳ್ಳು" ಜನರು ಮಾಡಿರುವ ಪ್ರತಿಕ್ರಿಯೆಗಳಿಗೆ ಉತ್ತರಿಸುವುದರಲ್ಲಿ ಯಾವ ಅರ್ಥವೂ ಇಲ್ಲ! ಅವರಿಗೆ ನನ್ನ ಪ್ರಾಮಾಣಿಕ ಸಲಹೆ ಇಷ್ಟೇ! ಇ೦ದು ನಿಮ್ಮ ತಾಯಿ(ಭಾಷೆ)ಯನ್ನು ಬಿಟ್ಟಿದ್ದೀರಿ, ನಾಳೆ ಇನ್ನುಳಿದ ಮನೆಯ ಹೆ೦ಗಳೆಯರನ್ನೂ ಹೀಗೇ ಬೀದಿಯಲ್ಲಿ ಬಿಡಬೇಡಿ.

    ReplyDelete
  20. AnonymousJune 21, 2011

    ರಾಕೇಶ್ ನೀವು ಕೆಲವಂದು ವಿಷಯ ಗಳನ್ನೂ ಹೊರಗೆ ಹಾಕಿದ್ದೀರಿ..ಅದು ತಮ್ಮ ಹೆಸರು ವಿಳಾಸ ಸಹಿತ್.!! ಕೆಲವು ಮುಖವಾಡ ಧರಿಸಿದ
    ಹಾಗು ತಮ್ಮ ಹೆಸರು ಮುಚ್ಚಿ ಬಡಾಯಿ ಕೊಚ್ಚಿ ಕೊಳ್ಳುವ ಸುದ್ದಿ ಶೂರ್ ರಗಿಂತ ತಾವು ಭಿನ್ನ ರಾಗಿ ಕಾಣುತ್ತೀರಿ..ಮೊದಲು ಸಂಪಾದಕೀಯ ಓದಿ
    ಅದರ ಹಾಗೇ ತಿಳಿದಿದ್ದೆ..ತಮ್ಮ ಲೇಖನ ಓದಿದ ನಂತರ ಇ ಸುದ್ದಿವೀರ ರ ಬಣ್ಣ ಗೊತ್ತಾಯಿತು..ತಮ್ಮ ಧೈರ್ಯಕ್ಕೆ ಹಾಟ್ಸ್ ಆಫ..ತಾವು ಹೀಗೆ ಮುಂದುವರೆಯಿರಿ...
    ನಮ್ಮ ಸಹನ ಶೀಲ ಕರ್ನಾಟಕ ವನ್ನು ತಾಲಿಬಾನಿ ಕರಣ ಗೊಳಿಸುತ್ತಿರುವ ಇವರ ನೀಚ ಬುದ್ದಿ ಗೆ ಧಿಕ್ಕಾರ್...

    kiran rao gulbarga.

    ReplyDelete
  21. AnonymousJune 21, 2011

    ಇ ಸುದ್ದಿ ವೀರ ರ ಪ್ರಕಾರ ಸಾಗಿದ್ದರೆ... ನಾನು ಗುಜರಾತಿ ನಲ್ಲಿ ಕೆಲಸ ಮಾಡುವ ಹಾಗೇ ಇರಲಿಲ್ಲ..ಅಲ್ಲಿಯ ಜನ ನಮಗೆ ಗುಜರಾತಿ ಬರದಿದ್ದರು ಹಿಂದಿ ಯಲ್ಲಿ ಮಾತನಾಡಿಸುತ್ತಾರೆ..ಎಂದಿಗೂ ಗುಜರಾತಿ ಕಾಲಿಯಿರಿ ಎಂದು ಯಾರು ಒತ್ತಾಯಿಸಿಲ್ಲ...
    ದೇಶ ದ ಅನೇಕ ಮೊಲೆಯಿಂದ್ ಬಂದ್ ಜನ ಅಲ್ಲಿ ಅನೇಕ ಭಾಷೆ ಮಾತನಾಡುತ್ತಾರೆ
    ಅಲ್ಲಿ ಎಲ್ಲಿವು ಗುಜರಾತಿ ಭಾಷೆ ಉಳಿಸಿ ಎಂದು ಬ್ಯಾನರ್ ಕಂಡಿಲ್ಲ ..ಆದರು ಗುಜರಾತಿ ಭಾಷೆ ಸಶಕ್ತ ವಾಗಿ ಬೆಳೆಯುತ್ತ ಸಾಗಿದೆ..ಸುದ್ದಿ ವಿರರು ಗಮನಿಸಬೇಕು..
    arun kumar m.k.
    koppal

    ReplyDelete